ಶಿಕ್ಷಣ ಮತ್ತು ಆರೋಗ್ಯವು ಉಚಿತ ಸೇವೆಯಾಗಿ ಜನರಿಗೆ ದಕ್ಕಬೇಕು. ಆದರೆ ನಮ್ಮ ದೇಶದಲ್ಲಿ ಅತಿಹೆಚ್ಚು ಆರ್ಥಿಕ ಶೋಷಣೆಗೆ ಅವಕಾಶ ಇರುವುದೇ ಈ ಎರಡು ಕ್ಷೇತ್ರಗಳಲ್ಲಿ. ಈಗ ಕೊರೊನಾ ತಂದೊಡ್ಡಿರುವ ಕಷ್ಟ ನಷ್ಟಗಳು ಜನಸಾಮಾನ್ಯರ ಬದುಕನ್ನು ಅಧಃಪತನಕ್ಕೆ ಇಳಿಸಿವೆ. ಹೀಗಿರುವಾಗ, ಕೋವಿಡ್ಪೀಡಿತರಾಗುವ ಜನಸಾಮಾನ್ಯರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಶಕ್ತರಾಗಿಲ್ಲ. ಶ್ರೀಸಾಮಾನ್ಯರ ಚಿಕಿತ್ಸೆಗೆ ಸರ್ಕಾರ ನೆರವಾಗಬೇಕು. ಇಲ್ಲವೇ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಅಧಿಕಗೊಳಿಸಬೇಕು. ರಾಜಕೀಯ ನಾಯಕರು ಪಕ್ಷಭೇದ ಮರೆತು, ತಾರತಮ್ಯವಿಲ್ಲದೆ ಎಲ್ಲರ ಸೌಖ್ಯ ಕಾಯುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು.