ಭಾಷೆ ಎಂಬುದೊಂದು ಆಯುಧವಿದ್ದಂತೆ. ಅದು ಕಾಯಲೂ ಬಲ್ಲದು, ಕೊಲ್ಲಲೂ ಬಲ್ಲದು. ಒಂದು ಸಮೂಹದ ಸೊಲ್ಲಡಗಿಸಿದರೆ ಆ ಸಮೂಹವೇ ಅವಸಾನವಾದಂತೆ. ಒಟ್ಟಾರೆ ನಾವು ಹೇಳಬೇಕಾದ್ದು ನಮ್ಮೆದುರಿನ ವ್ಯಕ್ತಿಗೆ ಸಂವಹನಗೊಂಡರೆ ಸಾಕು. ಅಲ್ಲಿಗೆ ಆ ಭಾಷೆಯ ಕೆಲಸ ಮುಗಿಯಿತು. ಲಾಕ್ಷಣಿಕರು ಅದಕ್ಕೆ ಕಟ್ಟು–ಕಟ್ಟಲೆ ಹಾಕ ಹೋದರೆ ಜೀವಂತ ಭಾಷೆ ಬಗ್ಗುವುದಿಲ್ಲ. ಪಾಣಿನಿಯ ಲಕ್ಷಣಸೂತ್ರಗಳಿಂದ ಸಂಸ್ಕೃತ ಭಾಷೆಯು ಆಡುಮಾತಿನಿಂದ ದೂರವಾಯಿತು.ಹಾಗೆಯೇ ಕನ್ನಡ ನುಡಿಯ ಉಚ್ಚಾರಣೆಗೂ ಲಕ್ಷಣಸೂತ್ರಗಳನ್ನು ಬಿಗಿದರೆ ಅದು ಬಗ್ಗುವುದಿಲ್ಲ. ಯಾವುದೇ ಭಾಷೆಯು ಅದನ್ನಾಡುವವರ ಸ್ವತ್ತು. ಉದಾಹರಣೆಗೆ ಕಲಿತ ಮೇಲೆ ಕನ್ನಡವಿರಲೀ, ಇಂಗ್ಲಿಷ್– ಹಿಂದಿ ಇರಲೀ ಬೇರಾವುದೇ ಭಾಷೆಯಾಗಿರಲಿ ಅದು ಆಡುವವರ ಕಾಮಧೇನು.