ಬೆಳೆ ಬೆಳೆಯಲು ರೈತ ಸಾಲ ಮಾಡಿಕೊಂಡ ಎಂದರೆ, ಅದರ ಹೊಣೆಯನ್ನು ಇಡೀ ಸಮಾಜ ಹೊರಬೇಕಾಗುತ್ತದೆ. ನಿಸರ್ಗ
ದೊಂದಿಗೆ ‘ಜೂಜಾಡುವ’ ರೈತ ನಮ್ಮ ಅನ್ನಕ್ಕಾಗಿ ತಾನೇಕೆ ಸಾಯಬೇಕು? ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿ ಮೂರು ನಾಮ ಹಾಕಿಸಿಕೊಂಡಿರುವ ನಮ್ಮ ಬ್ಯಾಂಕುಗಳು, ರೈತ ಎಂದರೆ ಮುಖ ತಿರುಗಿಸುತ್ತವೆ. ಸಾಲ ಮನ್ನಾ ಎಂಬುದು ಮಹಾದಯೆ ಅಲ್ಲ. ಅದು ಕರ್ತವ್ಯ. ಅದನ್ನೇ ದಾಳ ಮಾಡಿಕೊಂಡು ಕಚ್ಚಾಡುವ ಮಂದಿ ‘ಸಾವಿನ ಮನೆಯಲ್ಲಿ ಶ್ಯಾವಿಗೆ ತಿಂದಂತೆ’ ವರ್ತಿಸುತ್ತಾರೆ.