ಉದಯಪುರದ ಭೀಕರ ಕೃತ್ಯದ ಬಗ್ಗೆ ಪತ್ರಿಕೆಯ ಸಂಪಾದಕೀಯದಲ್ಲಿ (ಪ್ರ.ವಾ., ಜುಲೈ 1) ‘ತಲೆ ಕತ್ತರಿಸಿದ ಅಮಾನವೀಯ ಕೃತ್ಯವನ್ನು ಒಂದು ಸಮುದಾಯದ ಮೇಲಿನ ದಾಳಿ ಎಂಬಂತೆಯೋ, ಇನ್ನೊಂದು ಸಮುದಾಯದ ಪರವಾಗಿ ನಡೆಸಿದ ಕೃತ್ಯ ಎಂಬಂತೆಯೋ ನೋಡಬಾರದು’ ಎಂಬ ಮಾತು ಸಮಯೋಚಿತ. ತಪ್ಪಿತಸ್ಥರನ್ನು ಬಹಿರಂಗವಾಗಿ ಗಲ್ಲಿಗೇರಿಸಿ ಎಂದು ಜನಸಾಮಾನ್ಯರು ಆಗ್ರಹಿಸುತ್ತಿರುವ ಈ ಸಂದರ್ಭದಲ್ಲಿ, ತ್ವರಿತ ವಿಚಾರಣೆ ನಡೆಸಿ, ಈ ಹೇಯಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ. ಯಾವುದೇ ಸಿದ್ಧಾಂತದ ಪರವಾಗಿರುವವರು, ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಈ ಅಮಾನವೀಯ ಕೃತ್ಯವನ್ನು ಅರ್ಥೈಸುವ ಚಪಲಕ್ಕೆ ಕಡಿವಾಣ ಹಾಕಬೇಕು.