ಬರಿದಾದ ಜಲಾಶಯಗಳ ಒಡಲು ಕುರಿತ ವರದಿ (ಪ್ರ.ವಾ., ಮೇ 13) ಸಕಾಲಿಕವಾಗಿದೆ.ಕೆರೆಗಳು, ಕಲ್ಯಾಣಿಗಳು ಅಂತರ್ಜಲದ ಜೀವಾಳ. ಜಾಗತೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಇವು ಮಾಯವಾಗಿವೆ. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿದಿದೆ, ತಾಪಮಾನ ಹೆಚ್ಚಿದೆ. ಇದು, ಅಪಾಯದ ಎಚ್ಚರಿಕೆಯ ಕರೆಗಂಟೆ.
ಉಳಿದಿರುವ ಕೆರೆಗಳ ಹೂಳೆತ್ತುವ, ಒತ್ತುವರಿ ತೆರವು ಮಾಡುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಈ ಕೆಲಸ ಆಗದಿದ್ದರೆ ಮಳೆಯ ನೀರು ಭೂಮಿಯ ಒಡಲು ಸೇರುವುದಾದರೂ ಹೇಗೆ? ಕೆರೆಗಳು ಹಲವೆಡೆ ಕಸ ಹಾಗೂ ಕಲ್ಲು–ಮಣ್ಣು ಸುರಿಯುವ ತಾಣಗಳಾಗಿವೆ. ಅಂತರ್ಜಲ ಕುಸಿತಕ್ಕೆ ಇವು ಕೂಡ ಕಾರಣವಾಗಿವೆ. ಕೆರೆಗಳಿಗೆ ಕಾಯಕಲ್ಪ ನೀಡಬೇಕು. ಅಂತೆಯೇ ಕೆರೆಗಳ ಅಗತ್ಯ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಆಗಬೇಕು.