ಅಲ್ಲದೆ, ಗಾಂಧಿಯವರ ಸಾರ್ವಕಾಲಿಕವಾದ ವಿಚಾರಗಳಿಗೆ ರಾಜಕಾರಣಿಗಳ ಪೋಷಣೆ, ಪ್ರಚಾರಗಳ ಅವಶ್ಯಕತೆಯೂ ಇಲ್ಲ. ರಾಜಕಾರಣಿಗಳು ಧರ್ಮವನ್ನು ಉದ್ಧಾರ ಮಾಡುವುದಾಗಿ ಹೇಳಿಕೊಂಡು ಧರ್ಮವನ್ನು ಭ್ರಷ್ಟಗೊಳಿಸಿದ್ದಾಯಿತು. ರಾಜಕಾರಣಿಗಳ ಹಸ್ತಕ್ಷೇಪದಿಂದ ಧರ್ಮ, ವಿಜ್ಞಾನ, ತಂತ್ರಜ್ಞಾನ, ಚರಿತ್ರೆ, ಆಡಳಿತ ಎಲ್ಲವೂ ಅಪಾಯಕಾರಿಯಾಗಿ ಪರಿಣಮಿಸುತ್ತವೆಂಬ ಪಾಠವನ್ನು ಈಗಾಗಲೇ ಇತಿಹಾಸದಿಂದ ಕಂಡರಿತಿದ್ದೇವೆ. ಗಾಂಧಿಯನ್ನಾದರೂ ಮುಂದಿನ ತಲೆಮಾರಿಗೆ ಜೀವಂತವಾಗಿ, ಯಥಾರ್ಥವಾಗಿ ಹಸ್ತಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು ಗಾಂಧಿಯನ್ನು ಉದ್ಧಾರ ಮಾಡಬೇಕೆಂಬ ತರಹದ ಸಲಹೆಗಳನ್ನು ರಾಜಕಾರಣಿಗಳಿಗೆ ನೀಡುವುದನ್ನು ನಿಲ್ಲಿಸಿದರೆ ಮಹದುಪಕಾರವಾಗುತ್ತದೆ.