ಏಕರೂಪದ ಪಠ್ಯಕ್ರಮವು ಹಿಂದುಳಿಯುವಿಕೆ ಹಾಗೂ ಪ್ರಾದೇಶಿಕ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಮೀನಾಕ್ಷಿ ಬಾಳಿ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿ ದಂತಿದೆ (ಸಂಗತ, ಮೇ 26). ಹಳೆಮೈಸೂರು ಪ್ರಾಂತ್ಯ, ಮುಂಬೈ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳ ಪ್ರದೇಶ ಗಳು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದವು. ಆಗಲೇ ಏಕರೂಪದ ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿದ್ದರಿಂದ, ಆ ಪ್ರದೇಶಗಳಿಗೆ ತರತಮದ ಭಾವನೆ ಬಂದಂತಿಲ್ಲ. ಇಂದು ಈ ಪ್ರದೇಶಗಳು ಶೈಕ್ಷಣಿಕವಾಗಿ ಬಹಳಷ್ಟು ಮುಂದಿವೆ.