ಕೇವಲ ಒಂದು– ಎರಡು ಎಕರೆ ಗದ್ದೆ, ಹತ್ತು ಗುಂಟೆ ತೋಟ ಇರುವ ಅವನು, ಒಬ್ಬಳೇ ಮಗಳು ಮತ್ತು ಬುದ್ಧಿವಂತೆ ಎಂಬ ಕಾರಣಕ್ಕೆ ಸಾಲ ಮಾಡಿಯಾದರೂ ಎಂ.ಎ. ಓದಿಸಲು ಮುಂದಾಗಿದ್ದಾನೆ. ಇಲ್ಲವಾದಲ್ಲಿ ಇಷ್ಟಕ್ಕೇ ಓದು ನಿಲ್ಲಿಸಿ ಮದುವೆಗೆ ಸಿದ್ಧತೆ ಮಾಡುತ್ತಿದ್ದನೇನೊ. ವಾಸ್ತವವಾಗಿ ಶಾಲಾ- ಕಾಲೇಜು ಅಥವಾ ವಿಶ್ವವಿದ್ಯಾಲಯದ ತರಗತಿಗಳು ಆರಂಭವಾಗುವ ಮೊದಲೇ ಆಯಾ ಹಾಸ್ಟೆಲ್ಗಳು ಆರಂಭವಾಗಿರಬೇಕಲ್ಲವೇ? ಇಲ್ಲವಾದರೆ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದಾದರೂ ಹೇಗೆ? ಇಷ್ಟು ಸಣ್ಣ ಸಾಮಾನ್ಯ ಜ್ಞಾನವು ಸಮಾಜ ಕಲ್ಯಾಣ ಇಲಾಖೆಗಾಗಲೀ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಾಗಲೀ ಇರಬೇಡವೇ? ಬಡವರ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತದಿರಲು ಇಂತಹವೇ ಹತ್ತು ಹಲವು ಕಾರಣಗಳು ಇರಬಹುದಲ್ಲವೇ?