ಮಡಿ-ಮೈಲಿಗೆ ಹಳ್ಳಿಗಳಲ್ಲಿ ಹೆಚ್ಚಾಗುತ್ತಿದೆ. ನಗರಗಳಲ್ಲಿರುವ ದಲಿತರ ಮನೆಗಳಲ್ಲಿ ಚಪ್ಪರಿಸಿಕೊಂಡು ಊಟ ಮಾಡುವ ಸವರ್ಣೀಯರು ಹಳ್ಳಿಗಳಲ್ಲಿ ಮಾತ್ರ ಪ್ರತಿಷ್ಠೆಯ, ಶ್ರೇಷ್ಠತೆಯ ಪ್ರತೀಕವಾಗಿ ಅಸ್ಪೃಶ್ಯತೆ ಯನ್ನು ಉಳಿಸಿ ಬೆಳೆಸುತ್ತಿರುವುದು ಅಪಾಯಕಾರಿ ನಡೆ. ಇದು ‘ರಕ್ತ ಸುರಿಯದ ಮಾನಸಿಕ ಯುದ್ಧ’ವಾಗಿದೆ. ಈ ಪಿಡುಗನ್ನು ನಿವಾರಿಸುವ ಎಷ್ಟೋ ಪ್ರಯತ್ನಗಳಾಗಿವೆ. ಆದರೂ ಅಸ್ಪೃಶ್ಯತಾ ಆಚರಣೆ ಮರುಜೀವ ಪಡೆದು ಹೆಮ್ಮರವಾಗುತ್ತಿದೆ. ಇದನ್ನು ತಡೆಯಲು, ಅಸ್ಪೃಶ್ಯತೆ ಆಚರಣೆಯಲ್ಲಿರುವ ಊರಿನಲ್ಲಿ ರಾಜಕೀಯ ಪ್ರತಿನಿಧಿಗಳು ಚುನಾವಣೆಗೆ ನಿಲ್ಲುವ ಹಕ್ಕನ್ನು ಕಸಿಯುವ ಕಾನೂನು ಬರಬೇಕು. ತಮಿಳುನಾಡಿನಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಹಳ್ಳಿಗೆ ₹ 10 ಲಕ್ಷ ಬಹುಮಾನ ಪ್ರಕಟಿಸಲಾಗಿದೆ. ಇದು ಒಂದು ಉತ್ತಮ ನಡೆ. ಎಳೆ ಮಕ್ಕಳನ್ನೂ ಬಿಡದೆ ಅಸ್ಪೃಶ್ಯತಾ ಆಚರಣೆ ನಡೆಯುತ್ತಿದೆ. ಸಮಾನ ಶಿಕ್ಷಣ, ಆಹಾರ ಹಕ್ಕು, ವಸತಿ, ಉಚಿತ ಆರೋಗ್ಯ ಸೇವಾ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದರೆ ಇಂತಹ ತಾರತಮ್ಯ ಸ್ವಲ್ಪಮಟ್ಟಿಗೆ ನಿವಾರಣೆ ಆಗಬಹುದು.