ಕೆ.ಸಿ. ವ್ಯಾಲಿಯಿಂದ ಕೋಲಾರ ಜಿಲ್ಲೆಗೆ ಹರಿದ ವಿಷಯುಕ್ತ ನೀರಿನ ಬಗೆಗಿನ ಒಳನೋಟ (ಪ್ರ.ವಾ., ಫೆ. 10) ಜನಪ್ರತಿನಿಧಿಗಳು ಮತ್ತು ನಾಗರಿಕರ ಕಣ್ಣು ತೆರೆಸುವಂತಿದೆ. ವಾಯುಮಾಲಿನ್ಯ, ಜಲಮಾಲಿನ್ಯವು ದೆಹಲಿ, ಬೆಂಗಳೂರು ನಗರಗಳ ಸಮಸ್ಯೆಗಳೆಂದು ಸುಮ್ಮನೆ ಕೂರುವಂತಿಲ್ಲ.
ಹುಬ್ಬಳ್ಳಿಯ ಕೊಳಚೆ ಈಗಾಗಲೇ ಹೊನ್ನಾವರದವರೆಗೆ ಹಬ್ಬಿದ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಬಾಗಲಕೋಟೆಯ ಸಮಸ್ಯೆಯೂ ಹೌದು. ನದಿ, ಹಳ್ಳಗಳು ಸಹಜ ಸ್ವರೂಪ ಕಳೆದುಕೊಂಡು ಕೊಳಚೆ ಸಾಗಿಸುವ ಚರಂಡಿಗಳಾಗಿ ವರ್ಷಗಳೇ ಕಳೆದಿವೆ. ತಾಜಾ ಎಂದು ನಾವು ಖರೀದಿಸುವ ಕಾಯಿಪಲ್ಲೆಗಳು ಎಷ್ಟೋ ಬಾರಿ ಇಂತಹ ಕೊಳಚೆ ನೀರಿನಲ್ಲಿಯೇ ಬೆಳೆದಿರುವಂತಹವು. ಮಾಲಿನ್ಯ ಸಮಸ್ಯೆ ಯಾವುದೋ ಒಂದು ಸರ್ಕಾರ ಅಥವಾ ಇಲಾಖೆಯ ಸಮಸ್ಯೆ ಮಾತ್ರ ಅಲ್ಲ. ನಮ್ಮ ಕೈಲಾದದ್ದನ್ನು ಮಾಡಲೇಬೇಕಾದ ತುರ್ತು ಪರಿಸ್ಥಿತಿ ಈಗಿನದು.