ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರ ಸಾವು ಒಂದು ಲೆಕ್ಕವಾಗಬಹುದು ಅಷ್ಟೆ. ಆದರೆ ಅದರ ಹಿಂದಿನ ಅದೆಷ್ಟೋ ಕುಟುಂಬಗಳ ನೋವು, ಭಾರತೀಯರ ಆಕ್ರೋಶವನ್ನು ಪಾಕಿಸ್ತಾನ ಲೆಕ್ಕವಿಟ್ಟಿಲ್ಲ ಎನಿಸುತ್ತದೆ. ಭಾರತದ ‘ಸರ್ಜಿಕಲ್ ಸ್ಟ್ರೈಕ್’ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಉತ್ತರವಾಗಿತ್ತೇ ವಿನಾ ಭಾರತವೇ ಆರಂಭಿಸಿದ್ದಲ್ಲ. ಆದರೆ ನಮ್ಮ ಸರ್ಜಿಕಲ್ ಸ್ಟ್ರೈಕ್ಗೆ ಪ್ರತ್ಯುತ್ತರವೆಂಬಂತೆ ಅವರು ಮತ್ತೆ ದಾಳಿ ನಡೆಸಿದ್ದು ಭಂಡತನದ ಪರಮಾವಧಿ. ಬಹುಶಃ ಇಂದು ಪಾಕಿಸ್ತಾನದ ಪ್ರಜೆಗಳೂ ನಾವು ‘ಉರಿ’ ಸಿನಿಮಾ ನೋಡಿ ಖುಷಿ ಪಟ್ಟೆವಲ್ಲಾ ಅಷ್ಟೇ ಖುಷಿಪಡುತ್ತಿರಬಹುದು.
ಪಾಕಿಸ್ತಾನ ಇಂತಹ ಹೀನ ಕೃತ್ಯ ನಡೆಸಿದಾಗಲೆಲ್ಲಾ, ಭಾರತೀಯರ ಜೊತೆ ಬೆರೆತು ಬಾಳುತ್ತಿರುವ ಭಾರತದ ಕೋಟ್ಯಂತರ ಮುಸ್ಲಿಮರು ಅವಮಾನಕ್ಕೀಡಾಗುತ್ತಾರೆ. ‘ನಾವು, ಅವರಲ್ಲ’ ಎಂದು ಸಮರ್ಥನೆ ಕೊಟ್ಟುಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಕ್ಕಿಕೊಳ್ಳುತ್ತಾರೆ. ಸಹಿಸಲು ಅಸಾಧ್ಯವಾದ ನೋವನ್ನು ಅನುಭವಿಸುತ್ತಾರೆ ಎಂಬುದನ್ನು ಪಾಕಿಸ್ತಾನ ಗಮನಿಸಬೇಕು. ಅದರ ಚಾಳಿ ಹೀಗೇ ಮುಂದುವರಿದರೆ ಭಾರತದ ಮುಸ್ಲಿಮರೇ ಆ ದೇಶದ ವಿರುದ್ಧ ದಂಗೆ ಏಳಬಹುದು.