ಬೆಂಗಳೂರಿನ ಅಗಾಧ ದಾಹ ನೀಗಿಸಲು ತುಂಗೆ ಹಾಗೂ ಭದ್ರಾ ನದಿಗಳಿಂದ ನೀರು ತರಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿರುವುದು ವರದಿಯಾಗಿದೆ. ಬದುಕಲು ನಾನಾ ಬಗೆಯ ಅನುಕೂಲ ಇರುವ ಬೆಂಗಳೂರಿಗೆ ರಾಜ್ಯದ ಇತರೆಡೆಗಳಿಂದ ಮಾತ್ರವಲ್ಲದೆ ರಾಷ್ಟ್ರದ ಅನೇಕ ಭಾಗಗಳಿಂದಲೂ ಜನರು ವಲಸೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜಧಾನಿಯ ಅತಿ ದಾಹಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಬೆಂಗಳೂರು ಇನ್ನಷ್ಟು ವಿಸ್ತರಣೆಯಾಗುವುದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಾಗಿ, ರಾಜಧಾನಿಯ ಅಭಿವೃದ್ಧಿಗೆ ಮಾತ್ರ ಗಮನ ನೀಡದೆ, ರಾಜ್ಯದ ಇತರ ನಗರಗಳನ್ನೂ ಅಭಿವೃದ್ಧಿಪಡಿಸಿ ರಾಜಧಾನಿಗೆ ಜನರು ವಲಸೆ ತಪ್ಪಿಸಬೇಕಾದುದು ಅತ್ಯವಶ್ಯಕ. -ಪತ್ತಂಗಿ ಎಸ್. ಮುರಳಿ, ಬೆಂಗಳೂರು