‘ಯಾರೋ ಮಾಡುವ ತಪ್ಪಿಗೆ, ಯಾವುದೇ ದೇಶದ ಮೂಲೆಯಲ್ಲಿರುವ ಮಹಾಮಾರಿ ವೈರಾಣುವಿನ ಸೋಂಕನ್ನು ನಮ್ಮ ಮೇಲೆ ತಂದು ಹಾಕುವುದು ನ್ಯಾಯವೇ? ಇಷ್ಟು ದಿನ ಅನುಭವಿಸಿದ ನೋವು, ಸಂಕಟ ಸಾಲದೇ’ ಎಂಬ ಪ್ರಶ್ನೆ ಜನಸಾಮಾನ್ಯರ ಚರ್ಚೆಗೆ ಅನುವು ಮಾಡಿದೆ. ಕೊರೊನಾ ವೈರಸ್ಸಿನ ಹೊಸ ರೂಪಾಂತರ ತಳಿ ‘ಓಮಿಕ್ರಾನ್’ ಅಪಾಯಕಾರಿ ವೈರಾಣು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಇದು ಹರಡಬಹುದಾದ ಆತಂಕ ಎದುರಾಗಿದೆ. ವಿಮಾನಯಾನ ನಿರ್ಬಂಧ ಸಡಿಲಿಕೆ ಮಾಡಿದರೆ ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಹರಡಿರುವ ಈ ರೂಪಾಂತರಿ ತಳಿ ಆ ದೇಶಗಳಿಂದ ಬರುವ ಪ್ರಯಾಣಿಕರಿಂದ ನಮ್ಮ ದೇಶದೆಲ್ಲೆಡೆ ಹರಡುವ ಸಾಧ್ಯತೆ ಇಲ್ಲದಿಲ್ಲ. ದೇಶದ ಜನರನ್ನು ಅಪಾಯಕ್ಕೆ ದೂಡುವ ಮೊದಲು ಸರ್ಕಾರ ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಂಡು ದೇಶವಾಸಿಗಳ ರಕ್ಷಣೆ ಮಾಡಬೇಕಾಗಿದೆ.