ಕೆಲವು ಜನಪರ ಯೋಜನೆಗಳು ಹೆಚ್ಚು ಸಫಲವಾಗಿರುತ್ತವೆ. ಅಂತಹ ಯೋಜನೆಗಳು ವಿರೋಧ ಪಕ್ಷಗಳ ಮೆಚ್ಚುಗೆಗೆ ಪಾತ್ರವಾಗುವಂತೆ ಇದ್ದರೂ ಮುಂದೆ ಅಧಿಕಾರಕ್ಕೆ ಬರುವ ಪಕ್ಷವು ಅವುಗಳ ಹೆಸರಿನ ಕಾರಣದಿಂದ ಅವುಗಳನ್ನು ಮುಂದುವರಿಸಲು ಆಸಕ್ತಿ ತೋರುವುದಿಲ್ಲ. ಏಕೆಂದರೆ ಅವು ಹೊಂದಿರುವುದು ಬೇರೊಂದು ಪಕ್ಷದ ನಾಯಕರ ಹೆಸರುಗಳನ್ನು. ಇಂತಹ ಮನಃಸ್ಥಿತಿಯಿಂದಾಗಿ ಆ ಯೋಜನೆಗಳು ಅಲ್ಲಿಗೇ ಸ್ಥಗಿತವಾಗಬೇಕಾಗುತ್ತದೆ ಇಲ್ಲವೇ ಕುಂಟುತ್ತಾ ಸಾಗುವಂತಹ ಸ್ಥಿತಿ ಉಂಟಾಗುತ್ತದೆ. ಅದರ ಬದಲು ಈ ದೇಶದ ಉದ್ದಗಲಕ್ಕೂ ಸಾಧನೆ ಮಾಡಿದ, ಎಲ್ಲರೂ ಒಪ್ಪುವಂತಹ ಕ್ರೀಡಾಳುಗಳು, ಪರಿಸರ ಪ್ರೇಮಿಗಳು, ಸಮಾಜ ಸೇವಕರು, ಸಂಗೀತ, ಸಾಹಿತ್ಯ, ಚಿತ್ರರಂಗದ ದಿಗ್ಗಜರು, ಕವಿಗಳು, ಜಲ ಸಂರಕ್ಷಕರು, ಇಲ್ಲದವರಿಗೆ ಅನ್ನ ದಾಸೋಹ, ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಿ ಎಲೆ ಮರೆಯ ಕಾಯಿಯಂತೆ ಸೇವೆ ಮಾಡಿರುವ ಎಷ್ಟೋ ಮಹನೀಯರಿಲ್ಲವೇ? ಅಂತಹವರ ಹೆಸರು ಇಡುವುದು ಔಚಿತ್ಯಪೂರ್ಣ.