ರಘುನಾಥ ಚ.ಹ. ಅವರ ‘ಕಾವ್ಯ-ಕಲೆ: ಇದು ಪರ್ಯಾಯ ಪರ್ವ’ ಲೇಖನವು ಇಂದಿನ ಕವಿಗಳಿಗೆ ಭಯ ಹುಟ್ಟಿಸು ವಂತಿದೆ. ಪಂಪ, ಕುಮಾರವ್ಯಾಸರಂತೆ ಒಂದೆರಡು ಮಹಾಕಾವ್ಯಗಳನ್ನು ರಚಿಸಿ ಸಾರ್ವಕಾಲಿಕ ಶ್ರೇಷ್ಠ ಕವಿಗಳೆಂದು ಹೆಸರು ಮಾಡಿದ ಕಾಲವಿತ್ತು. ಕುವೆಂಪು, ಕೆಎಸ್ನ ಅವರಂತೆ ಜೀವನವಿಡೀ ಕಾವ್ಯವನ್ನೇ ಉಸಿರಾಗಿಸಿಕೊಂಡು ಮಹಾಕವಿಗಳಂತೆ ಜೀವಿಸಿದ ಉದಾಹರಣೆಗಳಿವೆ. ಕವಿಯೆಂದು ಹೇಳಿಕೊಳ್ಳಲು, ಕರೆಸಿಕೊಳ್ಳಲು ಹೆಮ್ಮೆಪಡುತ್ತಿದ್ದ ಕಾಲವದು. ಮುಂದೆ ಕಾಲ ಸರಿದಂತೆ ಕವಿಗಳು ಸಂಕೋಚಪಡುವ ಸ್ಥಿತಿ ಎದುರಾಯಿತು. ಕವಿಯೆಂದು ಹೇಳಿಕೊಂಡರೆ ಇವನು ಅರೆಹೊಟ್ಟೆಯ ಗಿರಾಕಿ ಎಂದು ಇತರರು, ಅದರಲ್ಲೂ ಕನ್ಯಾಪಿತೃಗಳು ಭಾವಿಸುತ್ತಾರೆ ಎಂಬ ಸಂಕೋಚದ ಸ್ಥಿತಿ! ಆದರೆ ಈಗಿನ ಸ್ಥಿತಿಯಲ್ಲಿ ಕವಿ ಎನಿಸಿಕೊಳ್ಳಲು ಭಯಭೀತರಾಗುವ ಪರಿಸ್ಥಿತಿ ಉಂಟಾಗಿ ಸಂದಿಗ್ಧ ಎದುರಾಗಿದೆ.
ಕವನದ ಯಾವುದೋ ಸಾಲನ್ನು ಅಥವಾ ಪದಪುಂಜವನ್ನು ಹೆಕ್ಕಿ ತೆಗೆದು ಪ್ರತ್ಯೇಕಿಸಿ, ಅದಕ್ಕೆ ಇಲ್ಲದ ಗೂಢಾರ್ಥ ವನ್ನು ಆರೋಪಿಸಿ ಕಲಹಗಳಲ್ಲಿ ಪರ್ಯವಸಾನವಾಗುವ ಅನೇಕ ಸಂದರ್ಭಗಳು ನಮ್ಮ ಕಣ್ಣ ಮುಂದೆ ಇವೆ. ಪ್ರಶಸ್ತಿ ಪುರಸ್ಕಾರಗಳು ಬರದಿದ್ದರೂ ಸರಿ ವಿವಾದಗಳು ಉಂಟಾಗದಿದ್ದರೆ ಸಾಕು ಎನ್ನುವ ಭಾವ ಮನೆ ಮಾಡಿದೆ. ಏನಿದ್ದರೂ ಪುರಸ್ಕಾರಗಳನ್ನು ಹೊಡೆದುಕೊಂಡು ಗೆಲುವಿನ ಬೀಗಿನಲ್ಲಿ ಎರಡು ಬೆರಳುಗಳನ್ನು ಎತ್ತಿ ತೋರಿಸುವ ಓಜರಿಗಷ್ಟೆ ಇದು ಸಕಾಲ.
- ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.