ಸ್ವತಂತ್ರ ಚಿಂತನೆ, ಸ್ವತಂತ್ರ ವ್ಯಕ್ತಿತ್ವ, ಸದೃಢ ಭವಿಷ್ಯ ರೂಪಿಸಿಕೊಳ್ಳಲು ಪ್ರೇರೇಪಿಸಬೇಕಾದ ಸ್ವಾಮೀಜಿ, ಹೆಣ್ಣುಮಕ್ಕಳ ಆಯ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮಾತನಾಡಿರುವುದು ಖಂಡನೀಯ. ಕೈ, ಕಾಲು ಮುರಿದು ಕೂರಿಸಿದಾಗ, ಅಂಗವೈಕಲ್ಯದ ಕಾರಣಕ್ಕೆ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸಂಬಂಧಿಗಳಿಗೆ ಕಾರಣ ಹೇಳಬಹುದು ಎಂದಿರುವ ಸ್ವಾಮೀಜಿ, ಅಂಗವಿಕಲರನ್ನೂ ಅವಮಾನಿಸಿದ್ದಾರೆ. ಇಂಥ ಧೋರಣೆಯು ಆರೋಗ್ಯಪೂರ್ಣ, ಲಿಂಗ ಸಮಾನ ಸಮಾಜ ನಿರ್ಮಾಣಕ್ಕೂ ವಿರುದ್ಧವಾಗಿದೆ. ಸ್ವಾಮೀಜಿ ತಕ್ಷಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಅಧ್ಯಯನದಲ್ಲಿ ತೊಡಗಿ, ತಮ್ಮ ಮಾನಸಿಕ ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಒಳಿತು.