ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ತೇ ಸರ್ವೋಚ್ಚ ಎಂದು ಹೇಳುವ ಮೂಲಕ ಪ್ರಸ್ತುತ ಸರ್ಕಾರದ ಗುಪ್ತಕಾರ್ಯಸೂಚಿಯನ್ನು ಅನಾವರಣಗೊಳಿಸಿದ್ದಾರೆ ಎನಿಸುತ್ತದೆ. ಸಂಸತ್ತಿಗೆ ಶಾಸನ ರೂಪಿಸುವ ಶ್ರೇಷ್ಠ ಅಧಿಕಾರವಿದೆ ನಿಜ. ಆದರೆ ಆ ಅಧಿಕಾರವು ನ್ಯಾಯಾಂಗದ ವಿಮರ್ಶೆಗೆ ಒಳಗಾಗುವುದು ಅಧಿಕಾರ ಪ್ರತ್ಯೇಕತಾ ಸಿದ್ಧಾಂತದ ಪ್ರಕಾರ ಸರಿ. ಕೇಶವಾನಂದ ಭಾರತಿ ಪ್ರಕರಣದಲ್ಲಿ, ಭಾರತ ಸಂವಿಧಾನದ ಮೂಲಭೂತ ರಚನೆ ಮತ್ತು ತತ್ವಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವುದರ ಮೂಲಕ ಶಾಸಕಾಂಗದ ಸರ್ವಾಧಿಕಾರಕ್ಕೆ ಕಡಿವಾಣ ಹಾಕಿದೆ. ಈ ತೀರ್ಪನ್ನೇ ಅವಹೇಳನ ಮಾಡುವಂತೆ ಮಾತನಾಡಿರುವ ಧನಕರ್ ಅವರು ದೇಶದ ನ್ಯಾಯಾಂಗದ ಮೇಲೆ ಪರೋಕ್ಷವಾಗಿ ದಾಳಿ ಮಾಡಿದ್ದಾರೆ.