ದೇಶದ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಜೀವನ್ ಮಿಷನ್ ಅಭಿಯಾನವು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಒಳ್ಳೆಯ ಯೋಜನೆಯೇ. ಆದರೆ ಈಗ ಹಳ್ಳಿಗಳಲ್ಲಿ ಸರಿಯಾಗಿ ನೀರಿನ ಮೂಲವನ್ನು ಗುರುತಿಸದೆಯೇ ಪೈಪ್ಲೈನ್ ತೆಗೆಯುತ್ತಾ ಹೋಗುತ್ತಿದ್ದಾರೆ. ಆ ಬಗ್ಗೆ ಜನ ಪ್ರಶ್ನಿಸಿದರೆ, ನೀರಿನ ಮೂಲದ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಅಸ್ಪಷ್ಟ ಮಾಹಿತಿ ನೀಡುತ್ತಾರೆ. ಮೊದಲು ನೀರಿನ ಮೂಲವನ್ನು ಕಂಡುಕೊಂಡು ಆನಂತರ ಮುಂದಿನ ಕೆಲಸವನ್ನು ಮಾಡಿದರೆ ಆ ಯೋಜನೆಯ ಬಗ್ಗೆ ಜನರಲ್ಲಿ ನಂಬಿಕೆ ಮೂಡುತ್ತದೆ. ಮಲೆನಾಡಿನ ಹಳ್ಳಿಗಳಲ್ಲಂತೂ ಅಲ್ಲಲ್ಲೇ ಕಿರು ತೊರೆಗಳಂಥ ನೀರಿನ ಮೂಲಗಳು ಸಿಗುತ್ತವೆ. ಅವುಗಳನ್ನೇ ಅಭಿವೃದ್ಧಿಪಡಿಸಿ ಮನೆ ಮನೆಗಳಿಗೆ ನೀರನ್ನು ಒದಗಿಸುವ ಯೋಜನೆ ಹಾಕಿಕೊಂಡರೆ ತುಂಬಾ ಒಳ್ಳೆಯದು.