ರಾಕ್ಷಸ ಆರ್ಥಿಕತೆಯನ್ನು ಮಣಿಸುವಂತೆ ಪ್ರಸನ್ನ ಅವರು ಕರೆ ಕೊಟ್ಟಿರುವುದು (ಪ್ರ.ವಾ., ಸೆ. 10) ಸ್ವಾಗತಾರ್ಹ. ಆಟೊಮೊಬೈಲ್ ಕೈಗಾರಿಕೆಗಳು ನೆಲ ಕಚ್ಚಿರುವ ಹಿನ್ನೆಲೆಯಲ್ಲಿ ಈ ವಿಶ್ಲೇಷಣೆ ಬಹಳ ವಿಭಿನ್ನವಾಗಿದೆ. ಇಂತಹ ಸ್ಥಿತಿಗೆ ಕಾರಣಗಳನ್ನು ಮಾಮೂಲಿ ಜಾಡಿನ ಆರ್ಥಿಕ ಚಿಂತನೆಯಿಂದ ಹೊರತಾಗಿ ಹುಡುಕಬೇಕಾಗಿದೆ. ದೇಶದಲ್ಲಿ ಪ್ರತಿದಿನ ಲಕ್ಷಗಟ್ಟಲೆ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಬ್ಯಾಂಕುಗಳು ದೀರ್ಘಾವಧಿ ಕಂತುಗಳ ಸಾಲ ನೀಡಿ ವಾಹನಗಳನ್ನು ಜನಸಾಮಾನ್ಯರಿಗೆ ತಳ್ಳುತ್ತಿವೆ. ಅತಿ ಸಣ್ಣ ರೈತ ಕೂಡ ಸಾಲದ ಮೂಲಕ ಟ್ರ್ಯಾಕ್ಟರ್ ಪಡೆದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಉದಾಹರಣೆಗಳಿವೆ. ಇಂತಹ ಸ್ಥಿತಿಯಲ್ಲಿ, ಪ್ರಸನ್ನ ಅವರು ಹೇಳಿರುವಂತೆ ಕಡಿಮೆ ಹೂಡಿ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರುವ ಆರ್ಥಿಕತೆಯ ಕಡೆಗೆ ನಾವು ಒಲವು ತೋರಬೇಕಾಗಿದೆ. ಇಲ್ಲದಿದ್ದರೆ ಸಮಸ್ಯೆಗಳು ಮೀತಿಮೀರಿ ನಾವು ರಾವಣರಾಜ್ಯವನ್ನು ನಿರ್ಮಿಸಿದಂತೆ ಆಗುತ್ತದೆ.