ಪಶ್ಚಿಮಘಟ್ಟಗಳ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಗೆ ಕೊನೆಯೆಂಬುದೇ ಇಲ್ಲವಾಗಿದೆ. ಪರಿಣಾಮ ಶೂನ್ಯವಾಗಿರುವ, ಸಾವಿರಾರು ಕೋಟಿ ಹಣವನ್ನು ಈಗಾಗಲೇ ನುಂಗಿ ನೀರು ಕುಡಿದಿರುವ ಎತ್ತಿನಹೊಳೆ ಯೋಜನೆ, ಕುಡಿಯುವ ನೀರಿನ ನೆಪದಲ್ಲಿ ಈ ಸಲ ಪ್ರಸ್ತಾವಿತವಾದ ಬೇಡ್ತಿ ವರದಾ ನದಿ ಜೋಡಣೆ, ಸರಕು ಸಾಗಣೆಗೆ ಘಟ್ಟವನ್ನು ಕೊರೆದು ನಿರ್ಮಿಸಲು ಯೋಜಿಸಿದ ಚತುಷ್ಪಥ ಮಾರ್ಗ, ರಸ್ತೆ ಅಗಲೀಕರಣ, ಭೂಹಂಚಿಕೆಯ ನೆಪವೊಡ್ಡಿ ಕಡಿತಲೆಗೆ ತಲೆಯೊಡ್ಡುವ ಲಕ್ಷಗಟ್ಟಲೆ ಹೆಕ್ಟೇರ್ ಅರಣ್ಯ... ಒಂದೆರಡಲ್ಲ. ಪಶ್ಚಿಮಘಟ್ಟವನ್ನು ಬಗೆದು ಹಸಿರು ಅಳಿಸಲು ಸಾಧ್ಯವಾಗುವಂತಹ ಎಲ್ಲ ಯೋಜನೆಗಳು ಆತುರದ ತುದಿಗಾಲಲ್ಲಿ ನಿಂತಿವೆ. ಪರಿಸರ ತಜ್ಞರ, ಪರಿಸರ ಪ್ರೇಮಿಗಳ, ಭೂವಿಜ್ಞಾನಿಗಳ, ಸ್ಥಳೀಯರ ಅನುಭವದ ವಿಚಾರಗಳಿಗೆ, ವರದಿಗಳಿಗೆ ಚಿಕ್ಕಾಸಿನ ಬೆಲೆಯೂ ಇಲ್ಲದಂತಾಗಿದೆ. ಯೋಜನೆಗಳು ವಿಫಲವಾದಾಗ ಉತ್ತರದಾಯಿತ್ವದ ಪ್ರಶ್ನೆಯೂ ಏಳುವುದಿಲ್ಲ. ಪರಿಸರದಿಂದಾಗಿ ನಾವು ಎನ್ನುವ ಪ್ರಜ್ಞೆ ಇಂತಹವರ ತಲೆಗೆ ಹೊಕ್ಕುವುದು ಯಾವಾಗ? ಇವೆಲ್ಲದರ ವಿರುದ್ಧ ದೊಡ್ಡಮಟ್ಟದ ಸಾರ್ವತ್ರಿಕ ಜನಾಂದೋಲನ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ.