ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಿದವರನ್ನು ಬಂಧಿಸಿರುವುದು ವರದಿಯಾಗಿದೆ (ಪ್ರ.ವಾ., ಸೆ. 15). ಅಭಿವೃದ್ಧಿ ಹೆಸರಲ್ಲಿ ಅಸಂಖ್ಯಾತ ಮರಗಳ ಮಾರಣಹೋಮ, ಎಲ್ಲೆ ಮೀರಿದ ಗಣಿಗಾರಿಕೆ ಹೀಗೆಲ್ಲಾ ಒಂದೆಡೆ ರಾಜಾರೋಷವಾಗಿ ಅಕ್ರಮ ನಡೆಯು ತ್ತಿರುವ ರಾಜ್ಯದಲ್ಲಿ ರಾಷ್ಟ್ರೀಯ ಉದ್ಯಾನದ ನಿವಾಸಿಗಳು ಸ್ವಚ್ಛ ಪರಿಸರದಲ್ಲಿ ಉಸಿರು ಬಿಗಿಹಿಡಿದು
ಬದುಕುವ ಕಾನೂನುಗಳೇಕೆ? ದೈನಂದಿನ ಜೀವನೋಪಾಯಕ್ಕಾಗಿ ಬಳಸುವ ರಸ್ತೆಯು ಹಾಳಾದ ಬಗ್ಗೆ ಮಾಹಿತಿ ಇದ್ದರೂ ಅದನ್ನು ಸರ್ವಋತು ರಸ್ತೆಯನ್ನಾಗಿ ದುರಸ್ತಿ ಮಾಡುವ ಕೆಲಸಕ್ಕೆ ಸ್ವತಃ ಅರಣ್ಯ ಇಲಾಖೆ ಯಾಕೆ ಮುಂದಾಗಲಿಲ್ಲ? ನಾಳೆಯ ದಿನ ಸ್ಥಳೀಯ ಅಂಗನವಾಡಿ ಕೇಂದ್ರಕ್ಕೂ ಬೀಗ ಜಡಿದು, ಆದಿವಾಸಿಗಳ ಮಕ್ಕಳ ಶಿಕ್ಷಣದ ಹಕ್ಕಿಗೂ ಚ್ಯುತಿಯುಂಟಾಗುವಂತಹ ಅರಣ್ಯ ಇಲಾಖೆಯ ಇಂಥ ಕಾನೂನನ್ನು ತಿದ್ದುಪಡಿಗೊಳಪಡಿಸುವ ಜರೂರಿದೆ.