ಪಾವಗಡ: ಸೋಲಾರ್ ಪಾರ್ಕ್ ಕರ್ನಾಟಕಕ್ಕೆ ಗೌರವ ತಂದುಕೊಡುವಂತಹ ಯೋಜನೆಯಾಗಿದ್ದು, ಜಗತ್ತಿನ 8ನೇ ಅದ್ಭುತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಗುರುವಾರ ಪಾವಗಡ ಸಮೀಪದ ತಿರುಮಣಿಯಲ್ಲಿ ಶಕ್ತಿ ಸ್ಥಳ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ನ ಮೊದಲ ಹಂತದ 600 ಮೆಗಾವಾಟ್ ಘಟಕ ಉದ್ಘಾಟಿಸಿ ಮಾತನಾಡಿದರು.
ಸೋಲಾರ್ ಪಾರ್ಕ್ ನಿಂದ ಪಾವಗಡ ತಾಲ್ಲೂಕಿನ ಭಾಗ್ಯದ ಬಾಗಿಲು, ಅಭಿವೃದ್ಧಿಯ ಬಾಗಿಲು ತೆರೆದಿದೆ ಎಂದರು.
ಈಗ ರಾಜಕೀಯ ಭಾಷಣ ಮಾಡಲ್ಲ. ಮತ್ತೊಂದು ದಿನ ಬಂದು ವಿರೋಧ ಪಕ್ಷದವರನ್ನು ಹರಾಜು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವೇ ಮೊದಲು: ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವೇ ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಗುರುವಾರ ಶಕ್ತಿಸ್ಥಳ ಸೋಲಾರ್ ಪಾರ್ಕ್ ನ ಮೊದಲ ಹಂತದ 600 ಮೆಗಾ ವಾಟ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ 3,628 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುತ್ತಿದೆ.
ಗುಜರಾತ್ 1585 ಮೆಗಾವಾಟ್, ಮಧ್ಯಪ್ರದೇಶ 1537 ಮೆಗಾವಾಟ್, ತಮಿಳು ನಾಡು 1822 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ತೆಲಂಗಾಣದಲ್ಲಿ 1000 ಮೆಗಾವಾಟ್ ಉತ್ಪಾದಿಸುತ್ತಿದೆ ಎಂದು ವಿವರಿಸಿದರು.
2013 ರಲ್ಲಿ 13 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈಗ 22000 ಮೆಗಾವಾಟ್ ಉತ್ಪಾದನೆ ಮಾಡುತ್ತಿದೆ. ಅನೇಕ ಸಮಸ್ಯೆ, ಸವಾಲುಗಳ ನಡುವೆಯೂ ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ ಎಂದರು.
ಈ ಸೋಲಾರ್ ಪಾರ್ಕ್ ಪ್ರದೇಶವಾದ ಶಕ್ತಿ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸಲಾಗುವುದು. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಲಾಗಿದೆ ಎಂದು ಹೇಳಿದರು.
ಸೋಲಾರ್ ಪಾರ್ಕ್ ರೈತರದ್ದೇ ಯೋಜನೆ. ರೈತರೇ ಮಾಲೀಕರು. ಸಹಕರಿಸಿದ್ದಕ್ಕೆ ಧನ್ಯವಾದಗಳು. ಪ್ರಧಾನಮಂತ್ರಿಯವರೂ ಕೂಡಾ ಈ ಯೋಜನೆ ಶ್ಲಾಘಿಸಿದ್ದಾರೆ. ಬೇರೆ ರಾಜ್ಯಗಳಿಗೆ ಈ ಮಾದರಿ ಅನುಸರಿಸಿ ವಿದ್ಯುತ್ ಸ್ವಾವಲಂಬನೆ ಸಾಧಿಸಿ ಎಂದು ಹೇಳಿದ್ದಾರೆ ಎಂದು ನುಡಿದರು.