Photos | ಕೇರಳ ವಿಮಾನ ದುರಂತದ ಭೀಕರತೆ ವಿವರಿಸುವ ಚಿತ್ರಗಳು
ಕೋಯಿಕ್ಕೋಡ್: ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು (ಐಎಕ್ಸ್ 1344) ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿದೆ. ಶುಕ್ರವಾರ ಸಂಜೆ 7.40ಕ್ಕೆ ನಡೆದ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ರನ್ವೇಯನ್ನು ದಾಟಿ ಮುಂದೆ ಸಾಗಿದ ವಿಮಾನವು 35 ಅಡಿ ಕಣಿವೆಗೆ ಬಿದ್ದು ಎರಡು ತುಂಡಾಯಿತು ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.ವಿಮಾನವು ರನ್ವೇಯಲ್ಲಿ ಇಳಿಯುವ ವೇಳೆಗೆ ಸ್ಕಿಡ್ ಆಯಿತು. ಈ ಸಂದರ್ಭದಲ್ಲಿ ಬೆಂಕಿ ಉಂಟಾಗಿಲ್ಲ. ಕೋವಿಡ್ ಪಿಡುಗಿನಿಂದಾಗಿ ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಆರಂಭಿಸಲಾದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಈ ವಿಮಾನ ಹಾರಾಟ ನಡೆಸಿತ್ತು.ವಿಮಾನದಲ್ಲಿ 174 ವಯಸ್ಕರು ಮತ್ತು 10 ಪುಟ್ಟ ಮಕ್ಕಳಿದ್ದರು. ಐವರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್ಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಲಟ್ ದೀಪಕ್ ಸಾಠೆ ಮೃತಪಟ್ಟಿದ್ದಾರೆ. ಅವರು ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರು. ವಿಮಾನ ತಪಾಸಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.