ನವದೆಹಲಿ: ಸೋಮವಾರ ರಾತ್ರಿ ದೆಹಲಿ ಹಾಗೂ ಚಂಡೀಗಢದ ಹಲವೆಡೆ ದೂಳು ಬಿರುಗಾಳಿ ಅಬ್ಬರಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ರಾತ್ರಿ 11:20ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿ ಭಾಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ದೂಳು ಬಿರುಗಾಳಿಯ ಅಬ್ಬರಕೆ ವಿದ್ಯುತ್ ಕಂಬಗಳ ಉರುಳಿವೆ, ಮರಗಳು ಬುಡಮೇಲಾಗಿರುವುದು ವರದಿಯಾಗಿದೆ.
ಬಿರುಗಾಳಿ ವಾತಾವರಣ ಸೃಷ್ಟಿಗೂ ಮುನ್ನ ದೆಹಲಿ–ಚಂಡೀಗಢ ಪ್ರದೇಶದಲ್ಲಿ ದಿನದ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಈ ಕಾಲದ ಸರಾಸರಿ ಉಷ್ಣತೆಗಿಂತಲೂ ಸೋಮವಾರ ಉಷ್ಣಾಂಶ ಹೆಚ್ಚಿತ್ತು ಎನ್ನಲಾಗಿದೆ.
ಶಾಲೆಗಳು ಬಂದ್
ಮುನ್ನೆಚ್ಚರಿಕಾ ಕ್ರಮವಾಗಿ ಗಾಜಿಯಾಬಾದ್ ಹಾಗೂ ನೋಯಿಡಾದ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ಸಂಜೆಗಿಂತಲೂ ಶಾಲೆಗಳನ್ನು ತೆರೆಯದಿರಲು ಆದೇಶಿಸಲಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಡಳಿತ ಸೂಚನಾ ಪಟ್ಟಿ ಹೊರಡಿಸಿದೆ.
ಸಂಚಾರದ ವೇಳೆ ಎಚ್ಚರಿಕೆ ವಹಿಸುವಂತೆ ದೆಹಲಿ ಟ್ರಾಫಿಕ್ ಪೊಲೀಸರು ತಿಳಿಸಿದ್ದು, ಗುಡುಗು ಸಹಿತ ಬಾರೀ ಮಳೆಯ ಮುನ್ಸೂಚನೆ ಇರುವುದಾಗಿ ದೆಹಲಿ ಮೆಟ್ರೊ ಹೇಳಿದೆ. ಬಿರುಗಾಳಿ ವೇಗ 90 ಕಿ.ಮೀ. ತಲುಪಿದರೆ ಮೆಟ್ರೊ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.