ಸೇಡಂ: ‘ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿರುದ್ಧ ಮಾ.16ರಂದು ಬೆಳಿಗ್ಗೆ 11ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಅನೀಲಕುಮಾರ ಐನಾಪುರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘15 ವರ್ಷಗಳಿಂದ ಸೇಡಂ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಚುನಾಯಿತರಾಗುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ’ ಎಂದು ಆರೋಪಿಸಿದರು.
‘ಶಾಸಕರು 15 ವರ್ಷಗಳಿಂದ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನ ಖರೀದಿ ಮಾಡಿಲ್ಲ. ಶಾಸಕರೇ ಯೋಜನೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ವಸತಿ ರಹಿತ ಜನರು ಸರ್ಕಾರದ ಯೋಜನೆ ಅಡಿಯಲ್ಲಿ ನಿವೇಶನ ಪಡೆಯಲು ಸುಮಾರು 10-12 ವರ್ಷಗಳ ಹಿಂದೆಯೇ ಪುರಸಭೆಯಲ್ಲಿ ₹5 ಸಾವಿರ ಕಟ್ಟಿದ್ದಾರೆ. ಆದರೆ, ಶಾಸಕರ ನಿರ್ಲಕ್ಷ್ಯದಿಂದ ನಿವೇಶನ ಕೊಟ್ಟಿಲ್ಲ. ನಗರದ ಹೌಸಿಂಗ್ ಬೋರ್ಡ್ ಯೋಜನೆ ಅಡಿಯಲ್ಲಿ ಈಗಾಗಲೇ ಸುಮಾರು 2000ಕ್ಕಿಂತಲೂ ಹೆಚ್ಚಿನ ಜನ ಸರ್ಕಾರಕ್ಕೆ ಹಣ ಭರಿಸಿದ್ದಾರೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ನೀಲಂಗಿ, ಚೆನ್ನಬಸ್ಸಪ್ಪ ನಿರ್ಣಿ, ಓಂಪ್ರಕಾಶ ಪಾಟೀಲ, ಅನೀಲ ರನ್ನೆಟ್ಲಾ, ಕಾಶಿನಾಥ ನಿಡಗುಂದಾ, ಸಾಗರ ಇದ್ದರು.