ಧಾರವಾಡ: ‘ರಾಜ್ಯದ ಬಿಜೆಪಿ ನಾಯಕರ ಕುಮ್ಮಕ್ಕಿನಿಂದಾಗಿ ಗೋವಾ ರಾಜಕೀಯ ಮುಖಂಡರು ಕಳೆದು ಒಂದು ತಿಂಗಳಲ್ಲಿ ಕಳಸಾ ಬಂಡೂರಿ ಉಗಮ ಸ್ಥಾನಕ್ಕೆ ಮೂರು ಬಾರಿ ಭೇಟಿ ನೀಡಿದೆ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಆರೋಪಿಸಿದರು.
‘ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್ ಅವರು ರಾಜ್ಯ ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಬರೆದಿರುವ ಪತ್ರವೇ ಇಂದು ನಮಗೆ ಮಾರಕವಾಗಿದೆ. ಅದಾದ ನಂತರ ಮೂರು ತಂಡಗಳು ಅಲ್ಲಿವೆ ಭೇಟಿ ನೀಡಿವೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಭೇಟಿ ನೀಡಿದವರು, ರಾಜ್ಯದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದರೂ ರಾಜ್ಯ ಬಿಜೆಪಿ ಮುಖಂಡರು ಅದಕ್ಕೆ ಪ್ರತಿಕ್ರಿಯೆ ನೀಡದಿರುವುದನ್ನು ನೋಡಿದರೆ ಅವರಿಗೆ ನಮ್ಮ ರಾಜ್ಯದ ಜನರ ಹಿತಕ್ಕಿಂತ, ಗೋವಾ ಬಿಜೆಪಿಯ ಹಿತವೇ ಮುಖ್ಯ ಎನ್ನುವಂತಾಗಿದೆ’ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸುವ ಮೂಲಕ ಬಿಜೆಪಿ ನಾಯಕರು ಗೋವಾ ಹಿತ ಕಾಪಾಡಲು ಮುಂದಾಗಿದ್ದಾರೆ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದ್ದಾರೆ. ರಾಜ್ಯದ ಜಲದ ಬಗ್ಗೆ ಕಾಳಜಿಯಿದ್ದರೆ ನ್ಯಾಯ ಮಂಡಳಿ ಹೊರಗಡೆ ಸಂಧಾನಕ್ಕೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.