ಬೆಂಗಳೂರು: ‘ರಾಜ್ಯದಲ್ಲಿ ‘ರಾಜಧರ್ಮ’ ಕಾಪಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಕೆಲವು ಸಲಹೆಗಳನ್ನು ಪಡೆದು ಬಂದಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ರಾಹುಲ್ ಬಳಿ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಚರ್ಚೆ ಮಾಡಲಿಲ್ಲ. ಮೈತ್ರಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಿರ್ವಹಿಸಲು ಚರ್ಚೆ ಮಾಡಿದ್ದೇನೆಯೇ ಹೊರತು ಯಾರಿಗೂ‘ಗುನ್ನ’ ಇಡುವ ಪ್ರಯತ್ನ ನಡೆಸಿಲ್ಲ’ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.
‘ರಾಜಧರ್ಮ’ ಪಾಲನೆ ಸಂಬಂಧ ರಾಹುಲ್ ಅವರಿಂದ ಪಡೆದ ಸಲಹೆ ಸೂಚನೆಗಳೇನು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಆ ಮಾಹಿತಿ ಹಂಚಿಕೊಳ್ಳಲು ಮುಖ್ಯಮಂತ್ರಿ ತಯಾರಾಗಲಿಲ್ಲ.
‘ಮುಖ್ಯಮಂತ್ರಿಯಾಗಿ ‘ರಾಜಧರ್ಮ’ ಪಾಲಿಸುವ ಮೂಲಕ ಐದು ವರ್ಷ ಸುಭದ್ರ ಆಡಳಿತ ನಡೆಸುತ್ತೇನೆ. ಈ ಬಗ್ಗೆ ಯಾರಿಗೂ ಅಪನಂಬಿಕೆ ಬೇಕಿಲ್ಲ. ಒಂದು ವರ್ಷ ಮಾತ್ರ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿಲ್ಲ. ಆಡಳಿತ ನಡೆಸುವ ಸಂಬಂಧ ಎಲ್ಲೂ ಅಸಹಾಯಕತೆ ತೋರಿಸಿಲ್ಲ.ಮೈತ್ರಿ ಸರ್ಕಾರದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
*ನಾನು ಡಲ್ ಆಗುವ ಪ್ರಶ್ನೆಯೇ ಇಲ್ಲ. ಸಂಪುಟದ ಸಹೋದ್ಯೋಗಿಗಳು ಬೆಂಗಳೂರಿನಲ್ಲೇ ಕುಳಿತಿರುವುದಿಲ್ಲ. ಓಡಾಡಿಕೊಂಡು ಕೆಲಸ ಮಾಡುತ್ತಿದ್ದಾರೆ
-ಎಚ್.ಡಿ. ಕುಮಾರಸ್ವಾಮಿ, ಸಿ.ಎಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.