ಚಿತ್ರದುರ್ಗ: ‘ಮೀಸಲು ಕ್ಷೇತ್ರಗಳಲ್ಲಿ ಭೋವಿ ಸಮುದಾಯಕ್ಕೆ ಬಿಜೆಪಿ ಒಂದೂ ಟಿಕೆಟ್ ನೀಡದಿದ್ದರೆ, ಮಧ್ಯ ಕರ್ನಾಟಕದಲ್ಲಿ ಆ ಪಕ್ಷದ ವಿರುದ್ಧ ಸಮುದಾಯ ಮತ ಚಲಾಯಿಸಲಿದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಎಚ್ಚರಿಸಿದರು.
ಟಿಕೆಟ್ಗೆ ಒತ್ತಾಯಿಸಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ಭೋವಿ ಸಮುದಾಯದ ಜತೆಗಿದ್ದರೆ ಟಿಕೆಟ್ ನೀಡಲಿ. ಇಲ್ಲದಿದ್ದರೆ, ಚುನಾವಣೆಯಲ್ಲಿ ಸಮುದಾಯ ತಕ್ಕ ಉತ್ತರ ನೀಡಲಿದೆ’ ಎಂದರು.
‘ಚಿತ್ರದುರ್ಗ ಕ್ಷೇತ್ರದಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿದರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಬಿಜೆಪಿಗೆ ಬಲ ತುಂಬುತ್ತೇವೆ. ಮಧ್ಯ ಕರ್ನಾಟಕದಲ್ಲಿ ಆ ಪಕ್ಷದ ಪರವಾಗಿ ನಿಲ್ಲುತ್ತೇವೆ. ಇಲ್ಲವಾದರೆ ಬೇರೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಸಮುದಾಯಕ್ಕೆ ಟಿಕೆಟ್ ನೀಡದೆ, ಈಗಾಗಲೇ ಅನ್ಯಾಯ ಮಾಡಲಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಟಿಕೆಟ್ ಘೋಷಿಸಿ. ಇಲ್ಲದಿದ್ದರೆ, ಸಮುದಾಯದ ಶಾಸಕರಾದ ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.