ತುಮಕೂರು: ದೇಶದಲ್ಲಿ ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಒಟ್ಟಿಗೆ ಹೋರಾಟ ನಡೆಸಲಿದ್ದು, ಹೀಗಾಗಿ ನಾನು ಸ್ಪರ್ಧೆ ಮಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾಧಿಕಾರಿ ಕಚೇರಿ ಹೊರಗಡೆ ಜನರನ್ನುದ್ದೇಶಿ ಮಾತನಾಡಿದರು.
ನನಗೆ ಯಾವುದೇ ಜಾತಿ, ಧರ್ಮ ತಾರತಮ್ಯ ಗೊತ್ತಿಲ್ಲ.ಯಾರೊಂದಿಗೂ ವೈಷಮ್ಯವಿಲ್ಲ. ಮಾಧ್ಯಮಗಳಲ್ಲಿ ತೋರಿಸುವ ಹಾಗೆ ಸಿದ್ಧರಾಮಯ್ಯ ಮತ್ತು ನಮ್ಮ ನಡುವೆ ಮನಸ್ತಾಪ ಇಲ್ಲ. ಇಬ್ಬರೂ ಒಟ್ಟಿಗೆ ರಾಜ್ಯವ್ಯಾಪಿ ಪ್ರವಾಸ ಮಾಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ತುಮಕೂರು ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉಪಮುಖ್ಯಮಂತ್ರಿ ಸೇರಿದಂತೆ ಅನೇಕರು ಮನವಿ ಮಾಡಿದರು. ಹೀಗಾಗಿ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಗೆಲುವಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ ಎಂದರು.
ಮಾ.31 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುವ ಸೂಚನೆ ಇದೆ ಎಂದರು.