ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಲು ಇಷ್ಟ ಇಲ್ಲದಿದ್ದವರು ಪಕ್ಷ ಬಿಟ್ಟು ಹೋಗಲಿ’

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ
Last Updated 6 ಏಪ್ರಿಲ್ 2019, 9:02 IST
ಅಕ್ಷರ ಗಾತ್ರ

ಬೆಂಗಳೂರು:‘ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು.‌ ಯಾರಿಗೆ ಇಷ್ಟ ಇಲ್ಲವೋ ಅವರು ಪಕ್ಷ ಬಿಟ್ಟು ಹೋಗಲಿ’ಎಂದು ಮಂಡ್ಯದ ಪಕ್ಷದ 'ರೆಬೆಲ್' ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸುಮಲತಾ ಅಂಬರೀಷ್ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ.‌ ಸುಮಲತಾ ಅಂಬರೀಷ್ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಯಾರೋ ಇಬ್ಬರು, ಮೂವರು ಕಾಂಗ್ರೆಸ್ ಕಾರ್ಯಕರ್ತರು ಹೋಗಿದ್ದಾರೆ. ಕಾಂಗ್ರೆಸ್ ಬಾವುಟ ಹಿಡಿದುಕೊಂಡಿದ್ದಾರೆ’ಎಂದರು.

ಮೈಸೂರು ಲೋಕಸಭಾ ಚುನಾವಣೆ ನಮ್ಮ ಪ್ರತಿಷ್ಠೆಯ ಚುನಾವಣೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುವುದು ಸತ್ಯ. ಆದರೆ, ನಾವು ಜಂಟಿಯಾಗಿ ಪ್ರಚಾರ ಮಾಡುತ್ತೇವೆ ಎಂದರು.

ಜಿ.ಟಿ.ದೇವೇಗೌಡ ಸಭೆಯಲ್ಲಿ ಯಾರೋ ಇಬ್ಬರು ಕಾಂಗ್ರೆಸ್‌ಗೆ ಮತ ಹಾಕಲ್ಲ ಅಂದರು. ಅದೇ ದೊಡ್ಡ ಸುದ್ದಿಯಾಗಿದೆ ಅಷ್ಟೇ. ಯಾರೋ ಒಬ್ಬರು- ಇಬ್ಬರು ಹೇಳಿದ ವ್ಯಕ್ತಿ ಅಭಿಪ್ರಾಯ ಮುಖ್ಖವಲ್ಲ. ಪಕ್ಷದ ವಿರುದ್ಧ ಕೆಲಸ ಮಾಡುವವರು ಪಕ್ಷ ಬಿಟ್ಟು ಹೋಗಿ ಎನ್ನುತ್ತೇವೆ ಎಂದರು.

ಶೇಕಡ 99 ರಷ್ಟು ನಾವು ಒಂದಾಗಿ ಕೆಲಸ ಮಾಡುತ್ತೇವೆ.‌ ಮೈಸೂರು ಜಿಲ್ಲೆಯಲ್ಲಿ 40 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ.‌ ಜಿ.ಟಿ.ದೇವೇಗೌಡ ಜೊತೆ ದೂರವಾಣಿಯಲ್ಲಿ ಮಾತಾಡಿದ್ದೇನೆ. ಜಿ.ಟಿ.ದೇವೇಗೌಡ ಮತ್ತು ನನ್ನ ಮಧ್ಯೆ ಸಾಕಷ್ಟು ವ್ಯತ್ಯಾಸ ಇತ್ತು. ಈಗ ನಾವು ಮಾತಾಡುತ್ತಿಲ್ಲವೇ. ಮೈತ್ರಿಯನ್ನು ವಿರೋಧ ಮಾಡುವವರು ಯಾರು ಪಕ್ಷದಲ್ಲಿ ಇರಬಾರದುಎಂದರು.

'ದೇಶದ ದೃಷ್ಟಿಯಿಂದ ಮೈತ್ರಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಒಪ್ಪಿಗೆ ಇಲ್ಲದಿದ್ದರೆ ಈಗಲೇ ಪಕ್ಷ ಬಿಟ್ಟು ಹೋಗಲಿ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ನಾವೇ ಎಲ್ಲರೂ ಒಪ್ಪಿಕೊಂಡಿದ್ದೇವೆ.‌ ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತೇವೆ ಎಂದರು.

'ನಾನು ಮತ್ತು ದೇವೇಗೌಡರು 10ರಂದು ಮೈಸೂರು, 11 ರಂದು ತುಮಕೂರು, 12 ಮಂಡ್ಯದಲ್ಲಿ ಜಂಟಿ ಪ್ರಚಾರ ಮಾಡುತ್ತೇವೆ. ಬಳಿಕ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇವೆ' ಎಂದು ಹೇಳಿದರು.

ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಚೆಲುವರಾಯಸ್ವಾಮಿ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರ ಜೊತೆ ಮಾತನಾಡುತ್ತೇನೆ. ಮಂಡ್ಯ ಜಿಲ್ಲಾ ಕಾಂಗ್ರೆಸ್‌ ನಾಯಕರು ಸಭೆಯನ್ನು ಭಾನುವಾರ ಕರೆದಿದ್ದೇನೆ. ಮಂಡ್ಯ ಜಿಲ್ಲೆಯ ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ಮಾಡುತ್ತೇನೆ. ಸಣ್ಣಪುಟ್ಟ ವ್ಯತ್ಯಾಸ ಬಗೆಹರಿಸುತ್ತೇವೆ' ಎಂದರು.

ಸಾಕಷ್ಟು ವರ್ಷಗಳಿಂದ ಮೈಸೂರಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ಸ್ಪರ್ಏ ಇರುವುದು. ಮೈತ್ರಿ ಸಮಯದಲ್ಲೂ ಕೆಳ ಹಂತದಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಕೆಲವರು ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕ ಉಭಯ ಪಕ್ಷಗಳ ನಾಯಕರು‌ ಹೊಂದಾಣಿಕೆಯಿಂದ ಹೋಗಲು ತೀರ್ಮಾನ ಮಾಡಿದ್ದಾರೆ ಎಂದರು.

'ನಾನು ಜಿ. ಟಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದೆ. ಇಲ್ಲ ಸರ್ ಸಣ್ಣಪುಟ್ಟ ಸಮಸ್ಯೆ ಇತ್ತು. ಈಗ ಸರಿ ಹೋಗಿದೆ ಅಂದಿದ್ದಾರೆ. ಬಿಜೆಪಿಯವರು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ' ಎಂದರು.

'ಮೈತ್ರಿ ಹೈಕಮಾಂಡ್ ಮಟ್ಟದಲ್ಲಾಗಿದ್ದು, ಎಲ್ಲರೂ ಒಪ್ಪಿ ಕೆಲಸ ಮಾಡಬೇಕು. ಯಾರಿಗಾದರೂ ಮೈತ್ರಿ ಒಪ್ಪಿಗೆ ಇಲ್ಲವಾದಲ್ಲಿ ಪಕ್ಷವನ್ನು ಬಿಡಬಹುದು' ಎಂದೂ ಹೇಳಿದರು.

ಕಾಂಗ್ರೆಸ್ ಸೇರ್ಪಡೆ: ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಹರೀಶಗೌಡ ಅವರು ಶನಿವಾರ ಕಾಂಗ್ರೆಸ್ ಸೇರಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹಾಗೂ ಮೈಸೂರು ಕಾಂಗ್ರೆಸ್ ಮುಖಂಡರು ಇದ್ದರು.

ಜೆಡಿಎಸ್ ಮುಖಂಡರಾದ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಗೌಡ, 23 ಸಾವಿರ ಮತ ಪಡೆದಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT