ಅಂಗವಿಕಲ ಮಗನ ಕೊಂದು ಆತ್ಮಹತ್ಯೆ

ಬೆಂಗಳೂರು: ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾದ ಚಂದ್ರಶೇಖರ್ (40) ಎಂಬುವರು ತಮ್ಮ ಮಗ ಲೋಕೇಶ್ವರ್ನನ್ನು (7) ಕೊಂದು, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದ್ಯಾರಣ್ಯಪುರ ಬಳಿಯ ಎಂ.ಎಸ್.ಪಾಳ್ಯದ ಚಂದ್ರಪ್ಪ ಲೇಔಟ್ನಲ್ಲಿ ಚಂದ್ರಶೇಖರ್ ವಾಸವಿದ್ದರು. ಅವರ ಮನೆಯಲ್ಲೇ ಕೃತ್ಯ ನಡೆದಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅವರು ಪತ್ನಿ ಪ್ರಮೀಳಾ, ಮಗಳು ಧನ್ಯಾ ಹಾಗೂ ಮಗ ಲೋಕೇಶ್ವರ್ ಜೊತೆ ನೆಲೆಸಿದ್ದರು. ಮಗ ಅಂಗವಿಕಲನಾಗಿದ್ದರಿಂದ, ಆತನ ನಿತ್ಯದ ಕೆಲಸಗಳನ್ನೆಲ್ಲ ತಂದೆಯೇ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
‘ಮಗನಿಗೆ ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಗುಣಮುಖರಾಗಿರಲಿಲ್ಲ. ಅದರಿಂದಾಗಿ ಚಂದ್ರಶೇಖರ್, ನೊಂದುಕೊಂಡಿದ್ದರು. ತಮಗೂ ಮಧುಮೇಹ ಇದ್ದಿದ್ದರಿಂದ ಬೇಸತ್ತಿದ್ದರು. ಈ ಬಗ್ಗೆ ಕುಟುಂಬದವರು ಹೇಳಿಕೆ ನೀಡಿದ್ದಾರೆ’ ಎಂದು ವಿವರಿಸಿದರು.
ನೇಣು ಹಾಕಿ ಕೊಂದರು: ‘ಪತ್ನಿ ಹಾಗೂ ಮಗಳು, ಮನೆಯಿಂದ ಹೊರಗಡೆ ಹೋಗಿದ್ದರು. ಮಗನ ಜೊತೆಯಲ್ಲಿ ಚಂದ್ರಶೇಖರ್ ಮನೆಯಲ್ಲಿದ್ದರು’ ಎಂದು ಪೊಲೀಸರು ಹೇಳಿದರು.
‘ಫ್ಯಾನ್ಗೆ ಸೀರೆ ಕಟ್ಟಿದ್ದ ಚಂದ್ರಶೇಖರ್, ಮಗನಿಗೆ ನೇಣು ಹಾಕಿ ಕೊಂದಿದ್ದರು. ನಂತರ, ತಾವೂ ಅದೇ ಸೀರೆಯಿಂದಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಗಂಟೆಗಳ ಬಳಿಕ ಪತ್ನಿ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ’ ಎಂದು ವಿವರಿಸಿದರು.