ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಮಾಸ್ಟರ್‌ ಪ್ಲಾನ್‌: ಹಲವು ಸಂಶಯ ಕೆಲವು ಆತಂಕ

Last Updated 22 ಜನವರಿ 2018, 19:37 IST
ಅಕ್ಷರ ಗಾತ್ರ

- ಸುಧೀರ್ ಕೃಷ್ಣಸ್ವಾಮಿ, ಮ್ಯಾಥ್ಯೂ ಇಡಿಕ್ಕುಳ, ಚಂಪಕಾ ರಾಜಗೋಪಾಲ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಹಳ ಸಮಯದಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ನಗರದ ಪರಿಷ್ಕೃತ ಮಹಾ ಯೋಜನೆ ಅಥವಾ ರಿವೈಸ್ಡ್‌ ಮಾಸ್ಟರ್‌ ಪ್ಲಾನ್‌ ಪ್ರಕಟಿಸಿದೆ. ಇದು ಮುಂದಿನ 15 ವರ್ಷಗಳ ಕಾಲ ಬಿಡಿಎ ವ್ಯಾಪ್ತಿಯಲ್ಲಿ, ನಗರದ 1,219 ಚದರ ಕಿಲೊ ಮೀಟರ್ ವ್ಯಾಪ್ತಿಯಲ್ಲಿ ನಡೆಯುವ ನಗರಾಭಿವೃದ್ಧಿಯನ್ನು ನಿಯಂತ್ರಿಸಲಿದೆ. ಪರಿಷ್ಕೃತ ಯೋಜನೆಯ ಕರಡಿನ ಕುರಿತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಇಂದು (ಜನವರಿ 23) ಕೊನೆಯ ದಿನಾಂಕ. ಇದಾದ ನಂತರ ಸಾರ್ವಜನಿಕ ಅಭಿಪ್ರಾಯಗಳ ಆಧಾರದಲ್ಲಿ ಮಾಡಬಹುದಾದ ಕೆಲ ಮಾರ್ಪಾಡುಗಳೊಂದಿಗೆ ಈ ಯೋಜನೆ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಅನ್ವಯ ಅನುಷ್ಠಾನಯೋಗ್ಯ ಶಾಸನಬದ್ಧ ನೀತಿಯಾಗುತ್ತದೆ. ಯೋಜನೆಯ ನಿರೂಪಣೆ, ಅದು ಬೆಂಗಳೂರು ನಗರದ ಮುಂದಿನ ಒಂದೂವರೆ ದಶಕದ ಅಭಿವೃದ್ಧಿಯ ಬಗ್ಗೆ ಮುಂದಿಟ್ಟಿರುವ ಪ್ರಸ್ತಾವಗಳು ಮತ್ತು ಇದರ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲ ಸಾಂಸ್ಥಿಕ ಮತ್ತು ಶಾಸನಾತ್ಮಕ ವಿಚಾರಗಳನ್ನು ಚರ್ಚಿಸುವ ಅಗತ್ಯವಿದೆ.

ಯೋಜನಾ ಪ್ರಕ್ರಿಯೆ: ಈ ಯೋಜನೆ ಬಿಡಿಎ ನೇತೃತ್ವದಲ್ಲಿ ರೂಪುಗೊಂಡಿದೆ. ಮುಖ್ಯ ವಿಚಾರವೇನೆಂದರೆ ಈ ಬಗೆಯ ಯೋಜನೆಯನ್ನು ರೂಪಿಸುವುದಕ್ಕೆ ಬಿಡಿಎಗೆ ಯಾವುದೇ ಸಾಂವಿಧಾನಿಕ ಅಧಿಕಾರವಿಲ್ಲ. ಸಂವಿಧಾನದ ಪ್ರಕಾರ, ನಗರ ಯೋಜನೆಯನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ನಗರ ಸ್ಥಳೀಯ ಸರ್ಕಾರ ಮತ್ತು ಸಂವಿಧಾನದ 74ನೇ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿರುವ ಮಹಾನಗರ ಯೋಜನಾ ಆಯೋಗ (metropolitan planning commission) ತಯಾರಿಸಬೇಕಿದೆ. ಸಂವಿಧಾನದ ಮೂಲಭೂತ ಆಶಯವನ್ನು ಮೀರಿ ರಾಜ್ಯ ಸರ್ಕಾರ ಯೋಜನೆಯ ಉಸ್ತುವಾರಿಯನ್ನು ಬಿಡಿಎಗೆ ನೀಡಿದ ಕ್ರಮವನ್ನು ಪ್ರಶ್ನಿಸಿದ ಅರ್ಜಿಯೊಂದು ಕರ್ನಾಟಕ ಹೈಕೋರ್ಟಿನ ಮುಂದಿದೆ. ಇಂಥದ್ದೊಂದು ಸಂದರ್ಭದಲ್ಲಿ ಬಿಡಿಎ ಕರಡು ಯೋಜನೆಯನ್ನು ಪ್ರಕಟಿಸಿತು ಎಂಬುದು ನಮಗೆ ನೆನಪಿರಬೇಕು.

ಸಾಂವಿಧಾನಿಕವಾಗಿ ಬಿಡಿಎಗೆ ಇರುವ ಅಧಿಕಾರದ ವಿಚಾರವನ್ನು ಬದಿಗಿರಿಸಿ ನೋಡಿದರೂ ಇಲ್ಲಿ ಮತ್ತೊಂದು ಪ್ರಶ್ನೆ ಇದೆ. ಇಡೀ ಯೋಜನೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಖಾಸಗಿ ಕಂಪನಿಯೊಂದಕ್ಕೆ ಬಿಡಿಎ ಹೊರಗುತ್ತಿಗೆ ನೀಡಿತ್ತು. ಹೀಗೆ ಮಾಡಿದ್ದರಿಂದ ಕಡೇಪಕ್ಷ ವೆಚ್ಚ ಕಡಿತವಾಗಿದೆಯೋ ಇಲ್ಲವೋ ಎನ್ನುವುದೂ ಸ್ಪಷ್ಟವಿಲ್ಲ. ಈ ರೀತಿ ಖಾಸಗಿ ಕಂಪನಿಯೊಂದಕ್ಕೆ ಯೋಜನಾ ತಯಾರಿಯ ಪ್ರಕ್ರಿಯೆಯನ್ನು ಗುತ್ತಿಗೆಗೆ ನೀಡುವುದರಿಂದ ಯೋಜನೆ ಜನರಿಂದ ದೂರವಾಗುತ್ತದೆ ಮತ್ತು ಇಡೀ ಪ್ರಕ್ರಿಯೆಯ ಉತ್ತರದಾಯಿತ್ವವನ್ನು ಯಾರು ಹೊರಬೇಕು ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ನಗರದ ಬದುಕನ್ನು ಸಂಕೀರ್ಣವಾದ ಹತ್ತು ಹಲವು ವಿಷಯಗಳು ನಿರ್ಣಯಿಸುತ್ತವೆ. ಆದುದರಿಂದ ನಗರ ಯೋಜನೆಯನ್ನು ಸಿದ್ಧಪಡಿಸುವ ಸಂಸ್ಥೆಗೆ ಸ್ಥಳೀಯ ಚರಿತ್ರೆ, ವರ್ತಮಾನ, ಅರ್ಥವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸ್ಪಷ್ಟವಾದ ಮತ್ತು ಆಳವಾದ ತಿಳಿವಳಿಕೆ ಇರಬೇಕು. ಅಂತಹ ತಿಳಿವಳಿಕೆಯ ಆಧಾರದಲ್ಲಿ ಯೋಜನೆಯ ವಿವಿಧ ಹಂತಗಳು ರೂಪುಗೊಳ್ಳಬೇಕು. ಖಾಸಗಿ ಕಂಪನಿಯೊಂದು ಯೋಜನೆಯನ್ನು ತಯಾರಿಸುವಾಗ ಅದಕ್ಕೆ ಇಂತಹ ಚಾರಿತ್ರಿಕ, ಸಾಮಾಜಿಕ ಮತ್ತು ಆರ್ಥಿಕ ತಿಳಿವಳಿಕೆ ಇರುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಈ ಬಗೆ ಅರಿವನ್ನು ಹೊಂದಬೇಕು ಎನ್ನುವ ಕಾನೂನಾತ್ಮಕ ಅಥವಾ ಆರ್ಥಿಕ ಪ್ರೇರಣೆಗಳು ಖಾಸಗಿ ಕಂಪನಿಗೆ ಇರುವುದಿಲ್ಲ. ಈ ಕಾರಣದಿಂದ ಯೋಜನೆ ಕೇವಲ ತಾಂತ್ರಿಕ ಕಸರತ್ತಾಗಿ ಬಿಡುತ್ತದೆ. ಅಂದವಾದ ನಕ್ಷೆಗಳ ತಯಾರಿಯಲ್ಲೇ ಸಂಕೀರ್ಣ ಸಮಸ್ಯೆಗಳೆಲ್ಲ ಉತ್ತರವನ್ನು ಕಂಡುಕೊಳ್ಳುತ್ತವೆ. ಯೋಜನೆಯ ನಿರೂಪಣೆ ಪ್ರಜಾಸತ್ತಾತ್ಮಕವಾಗಿ ನಡೆಯಬೇಕು ಎಂದಾದರೆ ಬಿಡಿಎ ಜನರಲ್ಲಿ ಈ ಅಗಾಧ ಪ್ರಕ್ರಿಯೆಯ ಬಗ್ಗೆ ವ್ಯಾಪಕವಾದ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ವಾರ್ಡ್ ಮಟ್ಟದಲ್ಲಿ, ನೆರೆಹೊರೆಯಲ್ಲಿ ಕಾರ್ಯಾಗಾರಗಳನ್ನು, ಶಿಬಿರಗಳನ್ನು ಏರ್ಪಡಿಸಬೇಕಾಗುತ್ತದೆ. ಪರಿಷ್ಕೃತ ಯೋಜನೆ, ಹೇಗೆ, ಯಾಕೆ ಮತ್ತು ಹಿಂದಿನ ಯೋಜನೆಗಿಂತ ಯಾವ ರೀತಿ ಭಿನ್ನವಾಗಿದೆ ಎನ್ನುವುದನ್ನು ಜನರಿಗೆ ಮನದಟ್ಟಾಗುವಂತೆ ತಿಳಿಸಬೇಕಾಗುತ್ತದೆ. ಬಿಡಿಎ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬಹಳ ಸೀಮಿತವಾದ ರೀತಿಯಲ್ಲಿ ಕೈಗೊಂಡಿತ್ತು. ನಗರದ ಎಂಟು ವಲಯಗಳಲ್ಲಿ ಯೋಜನೆಯ ರೂಪುರೇಷೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿತ್ತು. ಆದರೆ ಇಂತಹ ಸಭೆಗಳಲ್ಲಿ ಅಭಿಪ್ರಾಯ ನೀಡಿದ್ದು ಕೇವಲ ಸಮಾಜದ ಮೇಲ್‌ಸ್ತರದ ಮಂದಿ- ಮುಖ್ಯವಾಗಿ ವಿವಿಧ ಬಡಾವಣೆಗಳ ನಿವಾಸಿಗಳ ಕಲ್ಯಾಣ ಸಂಘಗಳಷ್ಟೇ ಇದರಲ್ಲಿ ಪಾಲ್ಗೊಂಡದ್ದು.

ನಗರಾಭಿವೃದ್ಧಿ ಕಾರ್ಯತಂತ್ರ: ಜನರ ಸುಲಲಿತ ಸಂಚಾರ ವ್ಯವಸ್ಥೆ ಮತ್ತು ಆರೋಗ್ಯಕರ ಪರಿಸರದೊಂದಿಗೆ ವಾಸಯೋಗ್ಯವಾದ ಮತ್ತು ಉತ್ತಮ ಆಡಳಿತ ವ್ಯವಸ್ಥೆಯನ್ನು ಹೊಂದಿದ ಬೆಂಗಳೂರನ್ನು ಕಟ್ಟುವ ಆಶಯವನ್ನು ಪರಿಷ್ಕೃತ ಮಹಾ ಯೋಜನೆ-2031 ಹೊಂದಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಳದ ಪ್ರಮಾಣ ಮುಂದಿನ ದಶಕಗಳಲ್ಲಿ ಕಡಿಮೆಯಾಗಲಿದೆ ಎಂದು ಹಲವು ವರದಿಗಳು ಈಗಾಗಲೇ ಅಂದಾಜಿಸಿವೆ. ಆದರೆ ವಿಭಿನ್ನವಾದ ಲೆಕ್ಕಾಚಾರವೊಂದನ್ನು ಅನುಸರಿಸುವ ಮೂಲಕ ಪರಿಷ್ಕೃತ ಯೋಜನೆ ನಗರದ ಜನಸಂಖ್ಯೆ 2031ರ ಹೊತ್ತಿಗೆ 2.03 ಕೋಟಿಗೆ ಏರಲಿದೆ ಎಂದು ಲೆಕ್ಕ ಹಾಕಿದೆ. ಈ ಜನಸಂಖ್ಯಾ ಹೆಚ್ಚಳಕ್ಕನುಗುಣವಾಗಿ ಹೊಸ ಯೋಜನೆಯಲ್ಲಿ ಹಾಲಿ ಇರುವ ಕೃಷಿ ಭೂಮಿಯನ್ನು ನಗರೀಕರಣಕ್ಕಾಗಿ ಅರ್ಥಾತ್ ಕಟ್ಟಡಗಳ ನಿರ್ಮಾಣಕ್ಕಾಗಿ ತೆರೆಯುವ ಪ್ರಸ್ತಾವನೆ ಮಾಡಿದೆ. ಈ ಮೂಲಕ ಸುಮಾರು 80 ಚದರ ಕಿಲೊ ಮೀಟರ್‌ನಷ್ಟು ಪ್ರದೇಶವನ್ನು ಹೊಸದಾಗಿ ಅಭಿವೃದ್ಧಿ ಪಡಿಸಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ. ಅಭಿವೃದ್ಧಿ ಪಡಿಸಬಹುದಾದ ಪ್ರದೇಶ ಹೆಚ್ಚುವುದು ಎಂದರೆ ಅರಣ್ಯ ಪ್ರದೇಶ ತತ್ಸಮವಾಗಿ ಕಡಿಮೆಯಾಗುವುದು ಎಂದರ್ಥ. ಹೊಸ ಯೋಜನೆಯಂತೆ ಎಲ್ಲವೂ ನಡೆದರೆ ನಗರದಲ್ಲಿ ಈಗ ಇರುವ 27 ಚದರ ಕಿಲೊ ಮೀಟರ್‌ನಷ್ಟು ಅರಣ್ಯ ಪ್ರದೇಶ ಕೇವಲ 5.7 ಚದರ ಕಿಲೊ ಮೀಟರ್‌ಗೆ ಕುಸಿಯಲಿದೆ. ಕೃಷಿ ಭೂಮಿಯನ್ನು ನಗರೀಕರಣಕ್ಕಾಗಿ ತೆರೆಯುವ ಪ್ರಸ್ತಾಪ ಮಾಡಿದ ನಂತರವೂ ಪರಿಷ್ಕೃತ ಯೋಜನೆ ಕೃಷಿ ಭೂಮಿಯ ಪ್ರಮಾಣದಲ್ಲಿ ಆದ ಕಡಿತವನ್ನು ಲೆಕ್ಕಹಾಕುವುದೇ ಇಲ್ಲ. ನಕ್ಷೆಯಲ್ಲಿ ಮಾತ್ರ ಎಲ್ಲವೂ ಹಳದಿಮಯ. (ಹಳದಿ ಬಣ್ಣ ನಕ್ಷೆಯಲ್ಲಿ ವಾಸಸ್ಥಳವನ್ನು ಸೂಚಿಸುತ್ತದೆ).

2015ರ ಯೋಜನೆ ನಗರವನ್ನು ಆದಷ್ಟು ಸೀಮಿತ ಬೆಳೆಸಬೇಕು ಎನ್ನುವ ಯೋಚನೆಯೊಂದಿಗೆ ಹೆಚ್ಚಿನ ಫ್ಲೋರ್ ಏರಿಯಾ ರೇಷಿಯೊಗೆ (FAR) ಅನುವು ಮಾಡಿಕೊಟ್ಟಿತ್ತು. ಅಂದರೆ ಸೀಮಿತ ಸ್ಥಳಾವಕಾಶದಲ್ಲಿ ಹೆಚ್ಚು ಅಂತಸ್ತುಗಳ ನಿರ್ಮಾಣಕ್ಕೆ ಒತ್ತು ನೀಡಿತು. ಹೊಸ ಯೋಜನೆ ಇದಕ್ಕೆ ವಿರುದ್ಧವಾಗಿದೆ. ಅದು ವಿಸ್ತೃತ ನಗರೀಕರಣಕ್ಕೆ ಅನುವು ಮಾಡಿಕೊಡುವಂತಿದೆ. ಫ್ಲೋರ್ ಏರಿಯಾ ರೇಷಿಯೊವನ್ನು ನಗರ ಕೇಂದ್ರದ ಪ್ರಧಾನ ಭಾಗಗಳಲ್ಲಿ ಕಡಿತಗೊಳಿಸಿದೆ ಮತ್ತು ನಗರದ ಹೊರವಲಯಗಳಲ್ಲಿ ಇದನ್ನು ಹೆಚ್ಚಿಸಿದೆ. ಪರಿಣಾಮವಾಗಿ ಕೇಂದ್ರ ಪ್ರದೇಶಗಳಲ್ಲಿ ಕಟ್ಟಡ ಸ್ಥಳಗಳಿಗೆ ಕೃತಕ ಅಭಾವ ಉಂಟಾಗಲಿದೆ. ಹೊರವಲಯ ವ್ಯಾಪಕವಾಗಿ ನಗರೀಕರಣಕ್ಕೊಳಗಾಗಲಿದೆ. ಆಗ ಈ ಹೊರವಲಯಗಳಲ್ಲಿ ಸರ್ಕಾರ ಮೂಲಭೂತ ಸೌಕರ್ಯಗಳಿಗಾಗಿ ಅಪಾರವಾದ ವೆಚ್ಚ ಮಾಡಬೇಕಾಗಿ ಬರುತ್ತದೆ. ಅದು ಸಾಧ್ಯವಾಗಲಿಲ್ಲ ಎಂದಾದರೆ ಜನ ತಮ್ಮದೇ ಆದ ಖಾಸಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಆರಂಭಿಸುತ್ತಾರೆ. ಇದನ್ನು ಉಳ್ಳವರು ಮಾತ್ರ ಮಾಡಬಹುದಾಗಿದೆ. ಇತರರಿಗೆ ನಗರ ಜೀವನ ಇನ್ನಷ್ಟು ದುರ್ಬರವಾಗಲಿದೆ.

ಪರಿಷ್ಕೃತ ಯೋಜನೆಯಲ್ಲಿ ವಾಸಕ್ಕಾಗಿ ಅಂದರೆ ಮನೆಗಳನ್ನು ನಿರ್ಮಿಸಬಹುದಾದ ಪ್ರದೇಶವನ್ನು ಈಗ ಇರುವ 212 ಚದರ ಕಿಲೊ ಮೀಟರ್‌ನಿಂದ 424 ಚದರ ಕಿಲೊ ಮೀಟರ್‌ಗೆ ವಿಸ್ತರಿಸಲಾಗಿದೆ. ಅದೇ ವೇಳೆ ವ್ಯಾಪಾರ ವ್ಯವಹಾರಗಳಿಗಾಗಿ ಇರುವ ಪ್ರದೇಶವನ್ನು 38.3 ಚದರ ಕಿಲೊ ಮೀಟರ್‌ಗಳಿಂದ 24.7 ಚದರ ಕಿಲೊ ಮೀಟರ್‌ಗಳಿಗೆ ಇಳಿಸಲಾಗಿದೆ. ಅಂದರೆ ವಾಸ ಪ್ರದೇಶವನ್ನು ಇಮ್ಮಡಿಗೊಳಿಸಲಾಗಿದೆ, ವ್ಯಾಪಾರ ವ್ಯವಹಾರಗಳಿಗಾಗಿ ಇರುವ ಪ್ರದೇಶವನ್ನು ಸುಮಾರು ಶೇಕಡ 36ರಷ್ಟು ಕಡಿತಗೊಳಿಸಲಾಗಿದೆ.

2015ರ ಪರಿಷ್ಕೃತ ಯೋಜನೆಯಲ್ಲಿ ಮಿಶ್ರಬಳಕೆಯ ಪ್ರದೇಶಗಳು ಅಂದರೆ ವಾಸ ಮತ್ತು ವ್ಯಾಪಾರ ಎರಡನ್ನೂ ಮಾಡಬಹುದಾದ ಪ್ರದೇಶಗಳು ಎನ್ನುವ ಹೊಸ ಕಲ್ಪನೆಯನ್ನು ಜಾರಿಗೊಳಿಸಲಾಗಿತ್ತು. ಹೀಗೆ ಮಾಡಿದ್ದಕ್ಕೆ ಯೋಜನಾಬದ್ಧವಾಗಿ ನಿರ್ಮಿಸಿದ ಹೊಸ ಪ್ರದೇಶಗಳಾದ ಇಂದಿರಾ ನಗರ ಮತ್ತು ಕೋರಮಂಗಲ ವಾಸಿಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಹಳೆಯ ಪ್ರದೇಶಗಳಾದ ಕಬ್ಬನ್ ಪೇಟೆ, ಕೆಂಪಾಪುರ ಅಗ್ರಹಾರಗಳಂತಹ ಪ್ರದೇಶಗಳ ನಿವಾಸಿಗಳಿಂದ ಬೆಂಬಲ ದೊರತಿತ್ತು. ಈ ಪರಿಕಲ್ಪನೆಯನ್ನು ಪರಿಷ್ಕೃತ ಯೋಜನೆ- 2031ರಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದೆ.

ಭೂಮಿಯ ಬಳಕೆ ಕುರಿತಂತೆ ಈ ರೀತಿಯ ಕಠಿಣ ವಿಭಜನೆ ಹಲವು ರೀತಿಯ ಆತಂಕಗಳನ್ನು ಮುಂದಿಟ್ಟಿದೆ. ಮೊದಲನೆಯದಾಗಿ, ನೀಲಿ ಪ್ರದೇಶಗಳನ್ನು (ಅಂದರೆ ವ್ಯಾಪಾರ ವ್ಯವಹಾರಗಳಿಗಾಗಿ ಮೀಸಲಿಟ್ಟ ಜಾಗಗಳನ್ನು) ಏಕಾಏಕಿ ಹಳದಿ ಪ್ರದೇಶಗಳನ್ನಾಗಿ ಅಂದರೆ ವಾಸಸ್ಥಳಗಳನ್ನಾಗಿ ಪರಿವರ್ತಿಸಲು ಹೊರಟಿರುವುದಕ್ಕೆ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗಲಿದೆ. ಅವರೆಲ್ಲರೂ ಅಧಿಕೃತವಾಗಿಯೇ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿರುವವರು. ಅವರು ಕಾನೂನಿನ ಮೊರೆ ಹೋಗಿಯೇ ತೀರುತ್ತಾರೆ ಮತ್ತು ಇದರಿಂದಾಗಿ ಹೊಸ ಯೋಜನೆಯ ಅನುಷ್ಠಾನಕ್ಕೆ ಕಾನೂನಿನ ಅಡೆತಡೆಗಳು ಎದುರಾಗಲಿವೆ. ಹೀಗಾದರೆ ವಾಣಿಜ್ಯ ವ್ಯವಹಾರಗಳನ್ನು ನಡೆಸುವುದಾದರೂ ಎಲ್ಲಿ?

ಅನುಷ್ಠಾನ: ಯೋಜನೆ ಎಷ್ಟೇ ಅದ್ಬುತವಾಗಿದ್ದರೂ ಅದರ ಅನುಷ್ಠಾನ ಒಂದು ಸಮರ್ಪಕವಾದ ವ್ಯವಸ್ಥೆಯನ್ನು ಬಯಸುತ್ತದೆ. ವಿಪರ್ಯಾಸವೆಂದರೆ ಪರಿಷ್ಕೃತ ಮಾಸ್ಟರ್ ಪ್ಲಾನ್‌ನಲ್ಲಿ ಅನುಷ್ಠಾನದ ಕುರಿತಾಗಿ ಕನಿಷ್ಠ ವಿವರಣೆ ಇದೆ. ’ಅನುಷ್ಠಾನ ಮತ್ತು ಹಣಕಾಸು ರೂಪುರೇಷೆಗಳು’ ಎನ್ನುವ ಅಧ್ಯಾಯ ಅತ್ಯಂತ ಕಿರಿದಾಗಿಯೂ, ಗೊಂದಲಮಯವಾಗಿಯೂ ಇದೆ. ಈಗಾಗಲೇ ನಗರದ ಯೋಜನೆ ಮತ್ತು ಆಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡಿರುವ ತಜ್ಞರ ಹಲವಾರು ಸಮಿತಿಗಳು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಬಲಿಷ್ಠವಾದ ವ್ಯವಸ್ಥೆಯೊಂದು ಇರಬೇಕು ಎನ್ನುವ ಸಲಹೆ ನೀಡಿವೆ. ಇತ್ತೀಚೆಗೆ ಬೆಂಗಳೂರಿನ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಸಲಹೆ ನೀಡುವುದಕ್ಕಾಗಿ ಸರ್ಕಾರ ನೇಮಿಸಿದ ಬಿ.ಎಸ್. ಪಾಟೀಲ ಸಮಿತಿ ಈ ಕುರಿತು ವ್ಯಾಪಕ
ಸಲಹೆ ಸೂಚನೆಗಳನ್ನು ನೀಡಿತ್ತು. ಯೋಜನೆಗಳ ನಿರೂಪಣೆ ಮತ್ತು ಮೇಲ್ವಿಚಾರಣೆಯಲ್ಲಿ ಸಮರ್ಪಕವಾಗಿ ಮತ್ತು ಶಾಸನಬದ್ಧವಾಗಿ ರಚನೆಗೊಂಡ ವಾರ್ಡ್ ಸಮಿತಿಗಳು, ಒಂದಕ್ಕಿಂತ ಹೆಚ್ಚು ನಗರಪಾಲಿಕೆಗಳು ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರ (Greater Bangalore Authority) ಪಾಲ್ಗೊಳ್ಳುವಂತೆ ವ್ಯವಸ್ಥೆಯನ್ನು ಮುರಿದು ಕಟ್ಟಬೇಕು ಎಂದು ಹೇಳಿತ್ತು.

ಪರಿಷ್ಕೃತ ಮಾಸ್ಟರ್ ಪ್ಲಾನ್ ಆಡಳಿತದ ಮತ್ತು ಸಾಂಸ್ಥಿಕ ವ್ಯವಸ್ಥೆಯ ಜತೆಗೆ ಯಾವುದೇ ರೀತಿಯ ಸಂವಾದವನ್ನು ಇಟ್ಟುಕೊಂಡಿಲ್ಲ ಎನ್ನುವುದು ಅಚ್ಚರಿಯ ವಿಚಾರ. ಬದಲಿಗೆ ಯೋಜನೆಯ ಅನುಷ್ಠಾನಕ್ಕಾಗಿ ‘ಪರಿಷ್ಕೃತ ಮಾಸ್ಟರ್ ಪ್ಲಾನ್ ಸಂಯೋಜನಾ ಹಾಗೂ ಮೇಲ್ವಿಚಾರಣಾ ಸಮಿತಿ’ (Masterplan Coordination and Monitoring Committee) ಎಂಬ ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕಿದೆ. ಇದರ ಶಾಸನಾತ್ಮಕ ಸ್ವರೂಪ ಗೊಂದಲಮಯವಾಗಿದ್ದು ಇದರ ಮೂಲಕ ಅನುಷ್ಠಾನ ಸರಿಯಾಗಿ ನಡೆಯಬಹುದು ಎನ್ನುವ ಭರವಸೆ ಹುಟ್ಟುವುದಿಲ್ಲ.

ಪರಿಷ್ಕೃತ ಮಾಸ್ಟರ್ ಪ್ಲಾನ್ ಬೆಂಗಳೂರಿನ ಸಂಕೀರ್ಣ ನಗರ ವಾಸ್ತವಗಳಿಗೆ ಪ್ರತಿಸ್ಪಂದಿಸಿಲ್ಲ. ಅದು ಈ ಮಹಾನಗರದ ಯೋಜನೆಯ ತಯಾರಿಯಲ್ಲಿ ಮತ್ತು ಅನುಷ್ಠಾನದಲ್ಲಿ ಎದುರಾಗುವ ಇರುವ ಸಾಂಸ್ಥಿಕ ಕೊರತೆಗಳಿಗೆ ಪ್ರತಿಸ್ಪಂದಿಸಿಲ್ಲ. ಪರಿಷ್ಕೃತ ಮಾಸ್ಟರ್ ಪ್ಲಾನ್ ಯೋಜನೆಯನ್ನು ತಳಮಟ್ಟದಿಂದ ರೂಪಿಸುವ ಪ್ರಕ್ರಿಯೆಯನ್ನು ಮೊಟ್ಟಮೊದಲಿಗೆ ಪ್ರಾರಂಭಿಸುವ ಅವಕಾಶವನ್ನು ಕರ್ನಾಟಕಕ್ಕೆ ಒದಗಿಸಿತ್ತು. ಇನ್ನಾದರೂ ಬಿಡಿಎ ಮತ್ತು ಅದರ ಸಲಹಾ ಸಂಸ್ಥೆ ಯೋಜನೆಯ ಅನುಷ್ಠಾನ ಕುರಿತಂತೆ ಸಾಕಷ್ಟು ಗಮನ ನೀಡದೆ ಹೋದರೆ ಪರಿಷ್ಕೃತ ಮಾಸ್ಟರ್ ಪ್ಲಾನ್ ಎಂಬುದು ಹುಟ್ಟುತ್ತಲೇ ನಿಸ್ತೇಜವಾಗಿಬಿಡುವ ಅಪಾಯವಿದೆ.

**

ಸುಧೀರ್ ಕೃಷ್ಣಸ್ವಾಮಿ, ಕಾನೂನು ತಜ್ಞ ಹಾಗೂ ನಗರದ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.

ಚಂಪಕ ರಾಜಗೋಪಾಲ್, ನಗರ ಯೋಜನಾ ತಜ್ಞೆ.

ಮ್ಯಾಥ್ಯೂ ಇಡಿಕ್ಕು, ನಗರಾಡಳಿತ ತಜ್ಞ ಮತ್ತು ವಕೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT