ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ವತಿಯಿಂದ ಸಾಮರಸ್ಯ ನಡಿಗೆ ರ್ಯಾಲಿಯನ್ನು ಫೆಬ್ರುವರಿ 2 ನೇ ವಾರದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಕ್ಷಾತೀತವಾಗಿ ನಡೆ ಯುವ ಈ ರ್ಯಾಲಿಯಲ್ಲಿ ಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ನೆಹರೂ ಮೈದಾನದವರೆಗೆ 2 ಕಿ.ಮೀ. ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಜನವರಿ 9 ರಂದು ಸೌಹಾರ್ದ ರ್ಯಾಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಹಿಂದಿನ ದಿನ ರಾತ್ರಿ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಲಾಯಿತು. ಮಾಜಿ ಪ್ರಧಾನಿಯಾಗಿ ನಿಷೇಧಾಜ್ಞೆ ಉಲ್ಲಂಘಿಸಬಾರದು ಎಂಬ ಉದ್ದೇಶದಿಂದ ರ್ಯಾಲಿಯನ್ನು ಮುಂದೂ ಡಲಾಗಿತ್ತು ಎಂದು ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮತೀಯ ಹಿಂಸೆಗಳಿಗೆ ಕಡಿವಾಣ ಹಾಕಲಾಗುವುದು. ಈಗಾ ಗಲೇ ಕುಮಾರಸ್ವಾಮಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಪಕ್ಷದ ಪ್ರಣಾಳಿಕೆಯಲ್ಲಿಯೇ ಎಲ್ಲ ಭರವಸೆಗಳ ಬಗ್ಗೆ ತಿಳಿಸಲಾಗುವುದು. ಅದರಲ್ಲಿ ಪ್ರಮುಖವಾಗಿ ಇಂತಹ ಕೋಮುಗಲಭೆಗಳ ನಿಯಂತ್ರಣ, ಸಾಮ ರಸ್ಯ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮೈತ್ರಿ ಇಲ್ಲ: ಚುನಾವಣೆಯ ನಂತರ ಯಾವುದೇ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿ ಸಿದ ದೇವೇಗೌಡ, ‘ಅಧಿಕಾರ ನನಗೆ ಮುಖ್ಯವಲ್ಲ. ಸಿದ್ಧಾಂತವೇ ಮುಖ್ಯ. ಜೆಡಿಎಸ್ ತನ್ನ ತತ್ವ–ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ’ ಎಂದರು.
‘ನನ್ನ ಮಾತು ಮೀರಿ 2006 ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈಜೋಡಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಾರಿ ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸವಿದೆ’ ಎಂದ ಅವರು, ಕಾವೇರಿ ಸಮಸ್ಯೆ, ಮಹದಾಯಿ ವಿಚಾರ, ರೈತರ ಸಮಸ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ಅವರನ್ನು ಪಕ್ಷ ಕಡೆಗಣಿಸಿಲ್ಲ. ಅವರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಎಂದು ಹೇಳಿದರು. ದತ್ತಾ ಅವರು ಒಬ್ಬ ಸಜ್ಜನ ರಾಜಕಾರಣಿ. ಅವರಿಗೆ ಒಳ್ಳೆಯ ಭವಿಷ್ಯವಿದೆ. ಅಂತಹ ನಾಯಕರನ್ನು ಕಡೆಗಣಿಸುವುದು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಮಹಾಪ್ರಧಾನ ಕಾರ್ಯ ದರ್ಶಿ ಬಿ.ಎಂ. ಫಾರೂಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ, ಎಂ.ಬಿ. ಸದಾಶಿವ, ಅಕ್ಷಿತ್ ಸುವರ್ಣ, ರಮೀಝಾ ಬಾನು, ಅಜೀಜ್ ಕುದ್ರೋಳಿ, ವಸಂತ ಪೂಜಾರಿ, ಎಂ.ಕೆ. ಖಾದರ್, ಹೈದರ್ ಪರ್ತಿಪ್ಪಾಡಿ, ಸುಮತಿ ಹೆಗ್ಡೆ, ರಮೇಶ್ ಗೌಡ ಇದ್ದರು.
ಕರಾವಳಿಯಲ್ಲಿ ಪಕ್ಷ ಸಂಘಟನೆ
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ಆದರೆ, ಈ ಭಾಗದಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದರು. ಪಕ್ಷದ ಮುಖಂಡರೆಲ್ಲರೂ ಈ ಕಾರ್ಯಕ್ಕೆ ಸಂಕಲ್ಪ ಮಾಡಿದ್ದಾರೆ. ಹಾಗಾಗಿ ಕರಾವಳಿಯಲ್ಲಿ ಮತ್ತೆ ಪಕ್ಷಕ್ಕೆ ಗೆಲುವುದು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
* *
ಸಾಧನಾ ಸಮಾವೇಶದ ಮೊದಲಿನ ಆರ್ಭಟ ಈಗ ಉಳಿದಿಲ್ಲ. ತಮ್ಮ ಶಕ್ತಿ ಕುಂದುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಾಗಿದೆ. ಎಚ್.ಡಿ. ದೇವೇಗೌಡ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.