ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಮೂರು ದಶಕಗಳ ಹಿಂದೆ ತಮಗೆ ನೀಡಲಾಗಿದ್ದ ನಿವೇಶನವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಮರಳಿಸಿದ್ದಾರೆ.
33 ವರ್ಷಗಳ ಹಿಂದೆ ಬಾಂದ್ರಾ ಉಪನಗರದಲ್ಲಿ ಕ್ರಿಕೆಟ್ ತರಬೇತಿ ಅಕಾಡೆಮಿಯನ್ನು ಆರಂಭಿಸಲು ಸರ್ಕಾರವು ಗಾವಸ್ಕರ್ ಅವರಿಗೆ ನಿವೇಶನ ನೀಡಿತ್ತು. ಆದರೆ ಅದರಲ್ಲಿ ಗಾವಸ್ಕರ್ ಇದುವರೆಗೂ ಆಕಾಡೆಮಿ ಆರಂಭಿಸಿರಲಿಲ್ಲ.
ಈ ಕುರಿತು ಹೋದ ವರ್ಷ ರಾಜ್ಯ ವಸತಿ ಸಚಿವ ಜಿತೇಂದ್ರ ಅವಹಾದ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಎಂಟು ತಿಂಗಳುಗಳಿಂದ ಗಾವಸ್ಕರ್ ಮತ್ತು ಸರ್ಕಾರದೊಂದಿಗೆ ಈ ಕುರಿತು ಮಾತುಕತೆಗಳು ನಡೆದಿದ್ದವು. ಇದೀಗ ಗಾವಸ್ಕರ್ ಅವರು ಸರ್ಕಾರಕ್ಕೆ ನಿವೇಶನ ಮರಳಿಸಿದ್ದಾರೆ.
ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ನಿವೇಶನ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನೂ ಭೇಟಿಯಾಗಿದ್ದರು. ಅಕಾಡೆಮಿ ಆರಂಭಿಸುವ ಯೋಜನೆಯನ್ನೂ ವಿವರಿಸಿದ್ರು. ಆದರೆ, ಚರ್ಚೆ ಫಲಪ್ರದವಾಗಿರಲಿಲ್ಲ. ವಸತಿ ಇಲಾಖೆಯು ನಿವೇಶನ ಮರಳಿಸುವಂತೆ ಗಾವಸ್ಕರ್ ಅವರನ್ನು ಕೋರಿತ್ತು.