ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ | ಸ್ಪರ್ಧೆಗಿಳಿಯುವ ಮುನ್ನ ಒಂದು ತಿಂಗಳ ತಾಲೀಮು ಅಗತ್ಯ: ಅಂಜಿಕ್ಯ ರಹಾನೆ

ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ
Last Updated 6 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಲ್ಲಿ ಆಡುವುದಕ್ಕಿಂತ ಮುನ್ನ ಕನಿಷ್ಠ ಒಂದು ತಿಂಗಳು ಅಭ್ಯಾಸ ಮಾಡುವುದು ಮುಖ್ಯ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದರು.

‘ದೇಶಿ ಅಥವಾ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಮುನ್ನ ಮೂರ್ನಾಲ್ಕು ವಾರಗಳ ಅವಧಿಯ ಶಿಸ್ತುಬದ್ಧ ತಾಲೀಮು ನಡೆಸಬೇಕು’ ಎಂದು ಇಎಲ್‌ಎಸ್ಎ (ಇಂಗ್ಲಿಷ್ ಲ್ಯಾಂಗ್ವೆಜ್ ಸ್ಪೀಚ್ ಅಸಿಸ್ಟೆಂಟ್) ಆ್ಯಪ್‌ನ ಪ್ರಚಾರ ರಾಯಭಾರಿಯಾಗಿರುವ ಅಜಿಂಕ್ಯ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನನ್ನ ಬ್ಯಾಟಿಂಗ್‌ ತಪ್ಪಿಸಿಕೊಳ್ಳುತ್ತಿರುವ ಕೊರಗು ಇದೆ. ಆದರೆ ಕೊರೊನಾ ವೈರಸ್‌ ತಡೆಗೆ ಲಸಿಕೆ ಕಂಡುಹಿಡಿಯುವವರೆಗೆ ಕ್ರಿಕೆಟ್ ಆರಂಭವಾಗುವುದಿಲ್ಲ. ಅಲ್ಲಿಯವರೆಗೂ ಕಾಯಲೇಬೇಕು’ ಎಂದರು.

‘ಕ್ರಿಕೆಟಿಗರ ಜೀವನಶೈಲಿಯಲ್ಲಿ ಈಗ ಬದಲಾವಣೆ ಆಗಿದೆ. ಭವಿಷ್ಯದಲ್ಲಿ ಮತ್ತೂ ಕೆಲವು ಅಂಶಗಳು ಬದಲಾಗಬಹುದು. ಆದರೆ, ಹಳೆಯ ವೈಭವದ ದಿನಗಳು ಮತ್ತೆ ಮರಳಲಿವೆ ಎಂಬ ವಿಶ್ವಾಸ ನನಗಿದೆ. ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಫೀಲ್ಡರ್‌ಗಳು ತಮಗೆ ಸೂಚಿಸಲಾದ ಸ್ಥಳಗಳಲ್ಲಿ ನಿಲ್ಲಲಿದ್ದಾರೆ. ಬೌಲರ್‌ಗಳು ವಿಕೆಟ್ ಗಳಿಸುವರು, ಬ್ಯಾಟ್ಸ್‌ಮನ್‌ಗಳು ರನ್ ಹೊಡೆಯುವರು ಮತ್ತು ಪ್ರೇಕ್ಷಕರ ಆ ಚಪ್ಪಾಳೆಗಳು ಪ್ರತಿಧ್ವನಿಸಲಿವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಲಾಕ್‌ಡೌನ್ ಸ್ಥಿತಿಯಲ್ಲಿ ನಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಮುಖ್ಯ. ನಮ್ಮ ಟ್ರೇನರ್ ಸೂಚಿಸಿದ ಮಾದರಿಯಲ್ಲಿ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದೇನೆ. ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT