ನವದೆಹಲಿ: ಕೊರೊನಾ ತಂದೊಡ್ಡಿರುವ ವಿಷಯ ಸ್ಥಿತಿಯಿಂದಾಗಿ ಭವಿಷ್ಯದ ಕೆಲವು ಕಾಲ ಕ್ರಿಕೆಟ್ನಲ್ಲಿ ಕೇವಲ ದೇಶೀಯ ಲೀಗ್ಗಳು ಮಾತ್ರ ಉಳಿಯುವ ಆತಂಕವಿದ್ದು ಹಾಗೆ ಆಗುವುದು ಬೇಡ ಎಂದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಶಿಸಿದ್ದಾರೆ.
ಇಎಸ್ಪಿಎನ್ ಕ್ರಿಕ್ ಇನ್ಫೊ ಆಯೋಜಿಸಿದ್ದ ವಿಡಿಯೊ ಸಂವಾದದಲ್ಲಿ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರೊಂದಿಗೆ ಮಾತನಾಡಿದ ಅಶ್ವಿನ್, ಕೊರೊನಾದಿಂದಾಗಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಧಕ್ಕೆ ಆಗಬಾರದು ಮತ್ತು ಸಾಂಪ್ರದಾಯಿಕ ಟೆಸ್ಟ್ ಪಂದ್ಯಗಳು ಉಳಿಯಬೇಕು ಎಂದರು.
‘ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಲಾಗಿದೆ. ಎಲ್ಲ ದೇಶಗಳಲ್ಲೂ ಗಂಭೀರ ಪರಿಸ್ಥಿತಿ ಇದೆ. ಆದ್ದರಿಂದ ಕ್ರಿಕೆಟ್ ಚಟುವಟಿಕೆ ಇನ್ನು ಯಾವಾಗ ಆರಂಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆರೋಗ್ಯಕರ ಕ್ರಿಕೆಟ್ ಜಗತ್ತನ್ನು ನೋಡಬೇಕಾದರೆ ನಿರೀಕ್ಷೆಗೂ ಮೀರಿದ ಅವಧಿ ಬೇಕಾದೀತು’ ಎಂದು ಅವರು ಅಭಿಪ್ರಾಯಪಟ್ಟರು.
‘ಟ್ವೆಂಟಿ–20 ಕ್ರಿಕೆಟ್ಗೆ ನನ್ನನ್ನು ನಾನು ಒಗ್ಗಿಸಿಕೊಂಡಿದ್ದೇನೆ. ಆದರೆ ನನಗೆ ಯಶಸ್ಸು ತಂದುಕೊಟ್ಟದ್ದು ಟೆಸ್ಟ್ ಕ್ರಿಕೆಟ್. ಆ ಮಾದರಿಯಲ್ಲಿ ಇನ್ನಷ್ಟು ಸಾಧನೆ ಮಾಡಲು ನನ್ನ ಮನಸ್ಸು ತುಡಿಯುತ್ತಿದೆ’ ಎಂದು ಹೇಳಿದ ಅಶ್ವಿನ್ ಟೆಸ್ಟ್ ಪಂದ್ಯಗಳನ್ನು ನಾಲ್ಕು ದಿನಗಳಿಗೆ ಇಳಿಸುವ ನಿರ್ಧಾರದಿಂದ ಖುಷಿಯಾಗಲಿ ಬೇಸರವಾಗಲಿ ಆಗಿಲ್ಲ ಎಂದರು.
ಭಾರತ ಕ್ರಿಕೆಟ್ ಆರೋಗ್ಯಕರವಾಗಿದೆ: ಭಾರತ ಕ್ರಿಕೆಟ್ನ ಸದ್ಯದ ಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ‘ಭಾರತದಲ್ಲಿ ಕ್ರಿಕೆಟ್ ಇನ್ನೂ ಆರೋಗ್ಯಕರವಾಗಿಯೇ ಇದೆ. ಕೋವಿಡ್ ಹಾವಳಿ ಆರಂಭವಾಗುವಾಗ ಯಾವ ಸ್ಥಿತಿಯಲ್ಲಿದ್ದೆವೋ ಅದೇ ಹಂತದಿಂದ ಕ್ರಿಕೆಟ್ ಪುನರಾರಂಭಿಸಬೇಕು’ ಎಂದರು.