ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಶೋಕಾಸ್ ನೋಟಿಸ್ ನೀಡಿದೆ.
ಈಚೆಗೆ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಗಳಿಗೆ ಅಮಿತಾಭ್ ಅವರು ಹಾಜರಾಗಿರಲಿಲ್ಲ. ಅದಕ್ಕೆ ಕಾರಣ ಕೇಳಿರುವ ಸಿಒಎ ನೋಟಿಸ್ ಜಾರಿ ಮಾಡಿದೆ. ಏಳು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
‘ಚೌಧರಿಯವರು ಸಭೆಗೆ ಹೋಗದಿರುವ ಕುರಿತು ನಮ್ಮ ಸಮಿತಿಗೆ ತಿಳಿದುಬಂದಿದೆ. ಅವರು ಹಾಜರಾಗದೇ ಇರುವುದು ತಪ್ಪು. ಅಲ್ಲದೇ ಆ ವಿಷಯವನ್ನು ಸಿಒಎ ಗಮನಕ್ಕೂ ತಂದಿಲ್ಲ. ತಮಗೆ ಹೋಗಲು ಸಾಧ್ಯವಾಗದಿರುವುದನ್ನು ಸಭೆಗಿಂತ ಮೊದಲೇ ತಿಳಿಸಿದ್ದರೆ ಬೇರೆ ವ್ಯವಸ್ಥೆ ಮಾಡಬಹುದಿತ್ತು’ ಎಂದು ಸಿಒಎ ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಚೌಧರಿಯವರನ್ನು ಸಂಪರ್ಕಿಸಿದರೂ ಅವರು ಮಾತುಕತೆಗೆ ಲಭ್ಯರಾಗಲಿಲ್ಲ.
ಜುಲೈ 14ರಿಂದ 20ರವರೆಗೆ ಲಂಡನ್ನಲ್ಲಿ ಐಸಿಸಿ ಸಭೆ ಇತ್ತು. ಸೆಪ್ಟೆಂಬರ್ 3ರಂದು ಬ್ಯಾಂಕಾಕ್ನಲ್ಲಿ ಎಸಿಸಿ ಸಭೆ ನಡೆದಿತ್ತು.