ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿ (ಸಿಎಒ) ಸಭೆಯು ಶನಿವಾರ ನಡೆಯಲಿದೆ.
ಈ ಸಭೆಯಲ್ಲಿ ಹಿರಿಯ ಕ್ರಿಕೆಟಿ ಗರಾದ ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರು ಎದುರಿಸುತ್ತಿರುವ ಹಿತಾಸಕ್ತಿ ಸಂಘರ್ಷ ಪ್ರಕರಣದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಬಿಸಿಸಿಐ ಒಂಬುಡ್ಸ್ಮನ್ ಡಿ.ಕೆ. ಜೈನ್ ಅವರು ಈಚೆಗೆ ಲಕ್ಷ್ಮಣ್ ಮತ್ತು ಗಂಗೂಲಿ ಅವರಿಗೆ ನೋಟಿಸ್ ನೀಡಿದ್ದರು.
ಲಕ್ಷ್ಮಣ್ ಅವರು ಮೂರು ಲಾಭದಾಯಕ ಹುದ್ದೆಗಳಲ್ಲಿದ್ದಾರೆ. ಅದರಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಂಡು ಉಳಿದದ್ದನ್ನು ಬಿಡಬೇಕು ಎಂದು ಸೂಚಿಸಲಾಗಿತ್ತು. ಲಕ್ಷ್ಮಣ್ ಅವರು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯರಾಗಿದ್ದಾರೆ. ಐಪಿಎಲ್ನಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಮಹಾಪೋಷಕರಾಗಿದ್ದರು. ಜೊತೆಗೆ ವೀಕ್ಷಕ ವಿವರಣೆಕಾರರೂ ಆಗಿದ್ದಾರೆ. ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಸಿಎಸಿ ಸದಸ್ಯರೂ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜೈನ್ ಅವರು ನೀಡಿರುವ ಸೂಚನೆಯ ಪ್ರಕಾರ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ ಮತ್ತು ರಾಬಿನ್ ಉತ್ತಪ್ಪ ಅವರು ಕಾಮೆಂಟ್ರಿ ಕಾರ್ಯವನ್ನು ಬಿಡಬೇಕು. ಈ ಮೂವರೂ ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ವಿಶ್ಲೇಷಕರಾಗಿದ್ದಾರೆ.
‘ನಾವು ಯಾರನ್ನೂ ನಿರ್ಬಂಧಿಸಿಲ್ಲ. ಆದರೆ, ಬಿಸಿಸಿಐ ನಿಯಮ 38ರಲ್ಲಿರುವ ಹಿತಾಸಕ್ತಿ ಸಂಘರ್ಷ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಏಕಕಾಲಕ್ಕೆ ಮೂರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ನಿಯಮದ ಪ್ರಕಾರ ಕ್ರಮ ಜರುಗಿಸಿದ್ದೇವೆ’ ಎಂದು ಜೈನ್ ಹೇಳಿದ್ದಾರೆ.