ಮೈಸೂರು: ಕರಣ್ ಶರ್ಮ (ಬ್ಯಾಟಿಂಗ್ 155) ಅವರ ಅಮೋಘ ಆಟದ ನೆರವಿನಿಂದ ಉತ್ತರ ಪ್ರದೇಶ ತಂಡದವರು ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಎದುರು ಉತ್ತಮ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದ್ದಾರೆ.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ನಾಲ್ಕು ದಿನಗಳ ಈ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಮೊದಲ ಇನಿಂಗ್ಸ್ನಲ್ಲಿ 90 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ.
ಟಾಸ್ ಗೆದ್ದಿದ್ದು ಆತಿಥೇಯ ಕರ್ನಾಟಕ. ಆದರೆ, ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭದಲ್ಲಿ ಯಶಸ್ಸು ಕೂಡ ಲಭಿಸಿತು. ಏಕೆಂದರೆ ವಿ.ವೈಶಾಕ್, ಎಂ.ಎಸ್.ಭಂಡಗೆ ಹಾಗೂ ಅಭಿಲಾಷ್ ಶೆಟ್ಟಿ ಅವರ ಬಿಗಿ ದಾಳಿಗೆ ಉತ್ತರ ಪ್ರದೇಶ ಸಂಕಷ್ಟಕ್ಕೆ ಸಿಲುಕಿತು. 34 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಪ್ರವಾಸಿ ತಂಡಕ್ಕೆ ನೆರವಾಗಿದ್ದು ಕರಣ್. ಉತ್ತಮ ಜೊತೆಯಾಟದ ಮೂಲಕ ಅವರಿಗೆ ನೆರವು ನೀಡಿದ್ದು ಸಮೀರ್ ಚೌಧರಿ ಹಾಗೂ ಸವಾನ್ ಸಿಂಗ್.
178 ಎಸೆತಗಳಲ್ಲಿ ಶತಕ ಪೂರೈಸಿದ ಕರಣ್ ಬಳಿಕವೂ ಉತ್ತಮ ಆಟ ಮುಂದುವರಿಸಿದರು. ಅವರ ಅಜೇಯ ಆಟದಲ್ಲಿ 20 ಬೌಂಡರಿ ಹಾಗೂ 2 ಸಿಕ್ಸರ್ಗಳಿದ್ದವು. ಈಗಾಗಲೇ 250 ಎಸೆತ ಎದುರಿಸಿದ್ದಾರೆ.
ಸಮೀರ್ ಅಕ್ಷರಶಃ ಗರ್ಜಿಸಿದರು. ಅವರು 74 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು.
ಸಂಕ್ಷಿಪ್ತ ಸ್ಕೋರ್: ಉತ್ತರ ಪ್ರದೇಶ: 90 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 285 (ಕರಣ್ ಶರ್ಮ ಬ್ಯಾಟಿಂಗ್ 155, ಸಮೀರ್ ಚೌಧರಿ 67, ಸವಾನ್ ಸಿಂಗ್ ಬ್ಯಾಟಿಂಗ್ 35; ಅಭಿಲಾಷ್ ಶೆಟ್ಟಿ 47ಕ್ಕೆ1, ವಿ.ವೈಶಾಕ್ 53ಕ್ಕೆ1, ಎಂ.ಎಸ್.ಭಾಂಡಗೆ 24ಕ್ಕೆ1, ತುಷಾರ್ 39ಕ್ಕೆ1).