ಮುಂಬೈ:ಕೋವಿಡ್–19 ಭೀತಿಯಿಂದಾಗಿ ಮುಂದೂಡಲಾಗಿರುವ ಐಪಿಎಲ್–2020 ಕುರಿತು ಚರ್ಚಿಸಲುಕಾನ್ಫರೆನ್ಸ್ಕಾಲ್ಮೂಲಕ ಮಾತುಕತೆ ನಡೆಸಿದ ಪ್ರಾಂಚೈಸ್ ಮಾಲೀಕರು ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ.
ಇದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದಿನ ತಿಂಗಳು 15ರವರೆಗೆ ಬಿಸಿಸಿಐ ಮುಂದೂಡಿದೆ.
ಸೋಮವಾರ ನಡೆದಸಭೆ ಬಳಿಕ ಮಾತನಾಡಿದಫ್ರಾಂಚೈಸ್ವೊಂದರ ಮಾಲೀಕರು, ‘ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ. ಇದು ಕೇವಲ ಸದ್ಯದ ಬೆಳವಣಿಗೆಗಳ ಕುರಿತ ಅನುಸರಣಾ ಸಭೆಯಾಗಿತ್ತು. ಕಳೆದ 48 ಗಂಟೆ ಅವಧಿಯಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹಾಗಾಗಿ ಐಪಿಎಲ್ ಆಯೋಜನೆ ಬಗೆಗಿನ ಮಾತುಕತೆ ಇನ್ನೂ ಸಾಧ್ಯವಾಗಿಲ್ಲ’ ಎಂದಿದ್ದಾರೆ.
‘ನಾವು ಕಾಯಲೇಬೇಕಿದೆ. ಪರಿಸ್ಥಿತಿಯ ಕುರಿತು ಚರ್ಚಿಸಲು ವಾರಕ್ಕೊಮ್ಮೆ ಕಾಲ್ ಕಾನ್ಫರೆನ್ಸ್ ಸಭೆಯನ್ನು ನಡೆಸಲಿದ್ದೇವೆ’ ಎಂದೂ ತಿಳಿಸಿದರು.
ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.ಭಾರತದಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, 127 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಮುಂದಿನ ಆಯ್ಕೆಗಳು ಕೇಂದ್ರ ಸರ್ಕಾರವು ಏಪ್ರಿಲ್ 15ರವರೆಗೆ ವಿದೇಶಿ ಪ್ರಯಾಣಿಕರಿಗೆ ವೀಸಾ ನಿರಾಕರಿಸಿರುವುದರಿಂದ, ಬೇರೆ ದಾರಿಗಳ ಕುರಿತು ಯೋಚಿಸುವ ಸಾಧ್ಯತೆ ಇದೆ.
ಒಂದು ವೇಳೆ ಏ.15ರ ವೇಳೆಗೆ ಪರಿಸ್ಥಿತಿ ಸುಧಾರಿಸಿದರೆ, ತಂಡಗಳನ್ನು ಎರಡು ತಂಡಗಳಾಗಿ ವಿಭಾಗಿಸಿ ಅಗ್ರ ನಾಲ್ಕು ತಂಡಗಳಿಗೆ ನಾಕೌಟ್ ಮಾದರಿಯ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ. ಇಲ್ಲವಾದರೆ, ದಿನವೊಂದರಲ್ಲಿ ನಡೆಯುವ ಎರಡು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶವೂ ಇದೆ.
ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿ ಪಂದ್ಯಗಳನ್ನು ಆಯೋಜಿಸುವುದು ಹಾಗೂಟೂರ್ನಿಯ ಅವಧಿಯನ್ನು ಕನಿಷ್ಠ 17ದಿನಗಳವರೆಗೆ ಮೊಟಕುಗೊಳಿಸುವ ಯೋಜನೆ ಬಿಸಿಸಿಐನದ್ದು ಎನ್ನಲಾಗಿದೆ.