ನವದೆಹಲಿ: ಭಾರತದ ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜಾ ಅನುಪಸ್ಥಿತಿಯು ಶ್ರೀಲಂಕಾದಲ್ಲಿ ಎಡಗೈ ಸ್ಪಿನ್ ವಿರುದ್ಧ ತಮ್ಮ ದೌರ್ಬಲ್ಯ ಪ್ರದರ್ಶಿಸಿದ ಜೋ ರೂಟ್ ಬಳಗಕ್ಕೆ ಸಂತಸದ ವಿಷಯವಾಗಿದೆ ಎಂದು ಇಂಗ್ಲೆಂಡ್ ಮಾಜಿ ಬ್ಯಾಟ್ಸ್ಮನ್ ಮಾರ್ಕ್ ಬುಚರ್ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಗಳಿಸಿತಾದರೂ ಗಾಲೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 10 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಅವರನ್ನು ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಹೆಣಗಾಡಿದರು.
ಭಾರತದ ಆಲ್ ರೌಂಡರ್ ಜಡೇಜಾ ಆಸ್ಟ್ರೇಲಿಯಾದಲ್ಲಿ ಹೆಬ್ಬೆರಳು ಗಾಯ ಮಾಡಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮತ್ತೊಬ್ಬ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಲಭ್ಯತೆಯೂ ಖಚಿತಪಟ್ಟಿಲ್ಲ.
1997-2004ರ ನಡುವೆ 71 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಚರ್, "ಶ್ರೀಲಂಕಾ ಸ್ಪಿನ್ನರ್ ಎಂಬುಲ್ಡೆನಿಯಾ ಎದುರಿಸುವಾಗ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಒದ್ದಾಡಿದರು" ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ..
"ಜಡೇಜಾ ಅವರ ಅನುಪಸ್ಥಿತಿಯಿಂದ ಇಂಗ್ಲೆಂಡ್ ಉತ್ಸಾಹಭರಿತವಾಗಿರುತ್ತದೆ. ಭಾರತವು ವಿಶ್ವಮಟ್ಟದ ಬೌಲಿಂಗ್ ದಾಳಿಯನ್ನು ಹೊಂದಿದೆ. ಆದರೆ, ಜಡೇಜಾ ಇದಕ್ಕೆ ವಿಭಿನ್ನ ಆಯಾಮವನ್ನು ಸೇರಿಸುತ್ತಾರೆ." ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಫ್ರೆಬ್ರುವರಿ 5ರಿಂದ ಚೆನ್ನೈನಲ್ಲಿ ಆರಂಭವಾಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ಸ್ಪಿನ್ನರ್ಗಳ ವಿರುದ್ಧ ಸ್ವೀಪ್ ಶಾಟ್ಗಳಿಗೆ ಅತಿಯಾಗಿ ಪ್ರಯತ್ನಿಸದಂತೆ ಸಹಾಯಕ ಕೋಚ್ ಗ್ರಹಾಂ ಥಾರ್ಪ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ ನೀಡಿದ್ದಾರೆ.