ಜೋಹಾನ್ಸ್ಬರ್ಗ್: ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಹೋರಾಟ ಬೆಂಬಲಿಸಿ ವೇಗದ ಬೌಲರ್ ಲುಂಗಿ ಗಿಡಿ ಹೇಳಿಕೆ ನೀಡಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯುವರ್ಣಭೇದ ಕುರಿತ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಯೋಜನೆಯನ್ನು ಪ್ರಕಟಿಸಿದೆ.
ಲುಂಗಿ ಗಿಡಿ ಅವರ ಹೇಳಿಕೆಯ ಬಳಿಕ ಖ್ಯಾತ ಬೌಲರ್ ಮಖಾಯ ಎನ್ಟಿನಿ ಸೇರಿದಂತೆ 30 ಆಟಗಾರರು ತಾವು ಕ್ರಿಕೆಟ್ ಆಡುವ ವೇಳೆ ಅನುಭವಿಸಿದ ಜನಾಂಗೀಯತೆಯ ಬಗ್ಗೆ ಧ್ವನಿಯೆತ್ತಿದ್ದರು.
ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ಮನ್ ಹಾಶೀಂ ಆಮ್ಲಾ ಕೂಡ ಗಿಡಿ ಬೆನ್ನಿಗೆ ನಿಂತಿದ್ದರು.
’ದಕ್ಷಿಣ ಆಫ್ರಿಕಾದ ಸಾರ್ವಜನಿಕರು, ಅಭಿಮಾನಿಗಳು ಹಾಗೂ ನಮ್ಮ ಮಂಡಳಿಯ ಭಾಗೀದಾರರುವರ್ಣಭೇದದ ವಿರುದ್ಧ ಧ್ವನಿಯೆತ್ತಿರುವುದನ್ನು ಕಡೆಗಣಿಸಲಾಗದು. ಈ ಕುರಿತು ಮಂಡಳಿಯು ‘ಸಾಮಾಜಿಕ ನ್ಯಾಯಕ್ಕಾಗಿ ಕ್ರಿಕೆಟ್ ಮತ್ತು ರಾಷ್ಟ್ರ ನಿರ್ಮಾಣ‘ (ಎಸ್ಜೆಎನ್) ಎಂಬ ಯೋಜನೆಯನ್ನು ಪ್ರಕಟಿಸುತ್ತದೆ’ ಎಂದು ಸಿಎಸ್ಎ ಹೇಳಿದೆ.
ಎಸ್ಜೆಎನ್ ಭಾಗವಾಗಿ ಸಿಎಸ್ಎ, ಒಂಬುಡ್ಸಮನ್ ನೇಮಕ ಮಾಡಲಿದೆ. ಆಟಗಾರರ ದೂರುಗಳ ನಿರ್ವಹಣೆ ಹಾಗೂ ಅವುಗಳ ಪರಿಹಾರ, ಆಟಗಾರರು, ಅಭಿಮಾನಿಗಳ ಮಧ್ಯೆ ಒಗ್ಗಟ್ಟು ರೂಪಿಸುವಿಕೆ ಒಂಬುಡ್ಸಮನ್ ನೇಮಕದ ಉದ್ದೇಶ.
’ನಮ್ಮ ಆಟಗಾರರು ಜನಾಂಗೀಯ ನಿಂದನೆ ಸಹಿಸಿಕೊಳ್ಳಬೇಕಾಯಿತು ಎಂಬುದರ ಕುರಿತು ವಿಷಾದವಿದೆ. ಹೊಸ ಯೋಜನೆಯಡಿಯಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಇದು ಸಮನ್ವಯ ಮತ್ತು ಎಲ್ಲರ ಒಳಗೊಳ್ಳುವಿಕೆಯ ಭರವಸೆ ನೀಡುತ್ತದೆ‘ ಎಂದು ಸಿಎಸ್ಎ ಮಂಡಳಿಯ ಮುಖ್ಯಸ್ಥ ಕ್ರಿಸ್ ನೆಂಜಾನಿ ಹೇಳಿದರು.