ಕೊಲಂಬೊ: ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ ಆರೋಪದ ಮೇಲೆ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ ಕರುಣಾರತ್ನೆ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
‘ಭಾನುವಾರ ಬೆಳಿಗ್ಗೆ ಕರುಣಾರತ್ನೆಅವರು ಚಲಾಯಿಸುತ್ತಿದ್ದ ವಾಹನವು ತ್ರಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅದರಲ್ಲಿದ್ದ ಚಾಲಕನಿಗೆ ಗಾಯವಾಗಿದೆ’ ಎಂದು ಕೊಲಂಬೊ ಪೊಲೀಸ್ ಇಲಾಖೆಯ ವಕ್ತಾರ ರುವಾನ್ ಗುಣಶೇಖರ ಅವರು ತಿಳಿಸಿದರು.
‘ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯದಿಂದ ಜಾಮೀನು ಪಡೆಯುವ ಸಾಧ್ಯತೆಯಿದೆ’ ಎಂದರು.
ಕರುಣಾರತ್ನೆ ಮೇಲೆ ಈ ಹಿಂದೆ ಸಾರಿಗೆ ನಿಯಮ ಉಲ್ಲಂಘಿಸಿದ ಯಾವುದೇ ಆರೋಪಗಳಿಲ್ಲ. ಈ ಕುರಿತಂತೆ ಅವರ ಪರ ವಕೀಲರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದಿರುವುದನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
‘ತಂಡದ ರಾಷ್ಟ್ರೀಯ ಆಟಗಾರ ಕರುಣಾರತ್ನೆ ಚಾಲನೆ ಮಾಡುತ್ತಿದ್ದ ವಾಹನವುಭಾನುವಾರ ಬೆಳಿಗ್ಗೆ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಕುರಿತಂತೆ ಅವರು ಕಾನೂನು ಕ್ರಮ ಎದುರಿಸುತ್ತಿದ್ದಾರೆ’ ಎಂದು ಕ್ರಿಕೆಟ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಈ ಮಧ್ಯೆ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿಯು ಆಟಗಾರ ಒಪ್ಪಂದ ನಿಯಾಮವಳಿ ಅಡಿಯಲ್ಲಿ ಈ ಪ್ರಕರಣದ ಪರಿಶೀಲನೆ ನಡೆಸಲಿದೆ. ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ವಿಚಾರಣೆಯನ್ನು ನಡೆಸಲಿದೆ’ ಎಂದು ತಿಳಿಸಿದೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಟೆಸ್ಟ್ ಸರಣಿಯಲ್ಲಿ ಕರುಣಾರತ್ನೆ ನೇತೃತ್ವದ ಶ್ರೀಲಂಕಾ ತಂಡವು ಜಯಿಸಿತ್ತು. ಆ ಮೂಲಕ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಎಡಗೈ ಬ್ಯಾಟ್ಸ್ಮನ್ ಆಗಿರುವ ಕರುಣಾರತ್ನೆ ಶ್ರೀಲಂಕಾ ತಂಡದ ಪರವಾಗಿ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.