ಉಪಖಂಡದಲ್ಲಿ ಮೊದಲ ಬಾರಿಗೆ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಹತ್ತಿರದಿಂದ ನೋಡಲು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೂ ಅವಕಾಶ ಲಭಿಸಿತು. ಈ ಟೂರ್ನಿಯ ಒಂದು ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಉದ್ಯಾನನಗರಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ಕೇಕೆ ಹಾಕಿದ್ದು ಎಂದಿಗೂ ಮೆರೆಯಲಾಗದ ಸವಿ ನೆನಪು.
l ಈ ವಿಶ್ವಕಪ್ನಲ್ಲಿ ಭಾರತದಲ್ಲಿ ಲೀಗ್ ಸೇರಿದಂತೆ ಒಟ್ಟು 14 ಪಂದ್ಯಗಳು ನಡೆದಿದ್ದವು. ಅದರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಪಂದ್ಯ 1987ರ ಅಕ್ಟೋಬರ್ 14ರಂದು ಚಿನ್ನಸ್ವಾಮಿ ಅಂಗಳದಲ್ಲಿ ಜರುಗಿತ್ತು.
l ಚೆನ್ನೈ, ಕೋಲ್ಕತ್ತ, ಮುಂಬೈನಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಪಂದ್ಯಗಳು ನಡೆದಿದ್ದವು. ಉಳಿದಂತೆ ಬೆಂಗಳೂರು, ಇಂದೋರ್, ದೆಹಲಿ, ಅಹಮದಾಬಾದ್, ಚಂಡೀಗಡ, ನಾಗಪುರದಲ್ಲಿ ತಲಾ ಒಂದು ಪಂದ್ಯ ನಡೆದಿದ್ದವು.
l ಬೆಂಗಳೂರಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 252 ರನ್ ಕಲೆಹಾಕಿತ್ತು. ಎದುರಾಳಿ ಕಿವೀಸ್ ಪಡೆ ನಿಗದಿತ ಓವರ್ಗಳು ಮುಗಿದಾಗ ಎಂಟು ವಿಕೆಟ್ ಕಳೆದುಕೊಂಡು 236 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತ 16 ರನ್ಗಳ ಜಯ ಸಾಧಿಸಿತ್ತು.
l ನವಜ್ಯೋತ್ ಸಿಂಗ್ ಸಿಧುಗೆ ಬೆಂಗಳೂರಿನಲ್ಲಿ ‘ಸಿಕ್ಸರ್ ಸಿಧು’ ಆದರು. ಅರ್ಧಶತಕ ಗಳಿಸಿದ ಕೀರ್ತಿ ಅವರದ್ದಾಯಿತು. ನವಜ್ಯೋತ್ 71 ಎಸೆತಗಳಲ್ಲಿ 75 ರನ್ ಗಳಿಸಿದರು. ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಗಳಿಸಿದರು.
l ನಾಯಕ ಕಪಿಲ್ ದೇವ್ ಏಳನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದು ಅಜೇಯ 72 (58ಎಸೆತ, 4ಬೌಂಡರಿ, 1ಸಿಕ್ಸರ್) ರನ್ ಗಳಿಸಿದ್ದರು. ಪಂದ್ಯಶ್ರೇಷ್ಠ ಗೌರವವೂ ಅವರಿಗೆ ಒಲಿಯಿತು.
l ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲ ವಿಕೆಟ್ ಒಪ್ಪಿಸಿದವರು ಸುನಿಲ್ ಗಾವಸ್ಕರ್. ಗಾವಸ್ಕರ್ ಎರಡು ರನ್ ಗಳಿಸಿ ರನ್ ಔಟ್ ಆಗಿದ್ದರು.
l ವೀಸ್ ತಂಡದ ಪರ ಕೆನ್ ರುದರ್ಫೋರ್ಡ್ (75 ರನ್) ಮತ್ತು ಅಲೆಕ್ಸ್ ಜೋನ್ಸ್ (64 ರನ್) ಅರ್ಧಶತಕಗಳನ್ನು ಬಾರಿಸಿದ್ದರು.
l ಉದ್ಯಾನನಗರಿಯ ಚೊಚ್ಚಲ ಪಂದ್ಯಕ್ಕೆ ವೆಸ್ಟ್ ಇಂಡೀಸ್ನ ಡೇವಿಡ್ ಆರ್ಚರ್ ಮತ್ತು ಇಂಗ್ಲೆಂಡ್ನ ಡಿಕಿ ಬರ್ಡ್ ಅಂಪೈರ್ ಆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.