ನವದೆಹಲಿ: ‘ಕಣ್ಣೀರಿಳಿಸುವುದರಲ್ಲಿ ಪುರುಷರು ನಾಚಿಕೆಪಡುವಂಥದ್ದೇನೂ ಇಲ್ಲ’ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಪುರುಷರ ಸಪ್ತಾಹ ಹಿನ್ನಲೆಯಲ್ಲಿ ಅವರು ಬಹಿರಂಗಪತ್ರವನ್ನೂ ಬರೆದಿದ್ದಾರೆ.
ಒಂದು ಕಾಲದಲ್ಲಿ ಅಳು ಪುರುಷರ ದೌರ್ಬಲ್ಯ ಎಂದು ಸಚಿನ್ ಸಹ ಅಂದುಕೊಂಡಿದ್ದರು. ಈಗ ಯಾರೂ ಅದನ್ನು ನಂಬಬಾರದು ಎಂದೂ ಬಯಸಿದ್ದಾರೆ. ಎಲ್ಲ ಕಡೆಯಿಂದ ಪರಿಸ್ಥಿತಿ ಕೈಕೊಟ್ಟಾಗ ತುಂಬಾ ಧೈರ್ಯವಿರುವ ರೀತಿ ತೋರ್ಪಡಿಸಿಕೊಳ್ಳಬಾರದು ಎಂದಿದ್ದಾರೆ.
‘ನೀವು ಕಣ್ಣೀರು ಹಾಕುವುದು ಅವಮಾನವೇನೂ ಆಗುವುದಿಲ್ಲ. ಇದು ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹೀಗಾಗಿ ಕಣ್ಣೀರು ಹಿಡಿದಿಟ್ಟುಕೊಳ್ಳುವುದೇಕೆ’ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
‘ಗಂಡಸರು ಅಳಬಾರದು. ಇದು ದೌರ್ಬಲ್ಯದ ಸಂಕೇತ ಎಂಬುದನ್ನು ನಂಬಿಕೊಂಡೇ ಬೆಳೆದಿದ್ದೆ. ಅದು ತಪ್ಪು ಎಂದು ಮನವರಿಕೆಯಾದ ಕಾರಣ ಈ ಪತ್ರ ಬರೆದಿದ್ದೇನೆ. ನನ್ನ ಹೋರಾಟ ಮತ್ತು ನೋವು ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ’ ಎಂದು 46 ವರ್ಷದ ಕ್ರಿಕೆಟ್ ಕಣ್ಮಣಿ ಹೇಳಿದ್ದಾರೆ.
ವಿದಾಯ ಹೇಳುವ ದಿನ ಸಚಿನ್ ಕೂಡ ಭಾವುಕರಾಗಿದ್ದರು. ‘ಭಾವನೆಗಳ ಪ್ರವಾಹವನ್ನೇ ಅಪ್ಪಿಕೊಂಡಿದ್ದ ಕ್ಷಣವದು’ ಎಂದು ಅವರು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.