ಮುಂಬೈ: ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್, ಮುಂಬರುವ ಟಿ–20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಉತ್ತಮ ಫಿನಿಷರ್ ಆಗಬಲ್ಲರು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಲ್ಲಿದ್ದ ಕಾರ್ತಿಕ್ ಈ ಬಾರಿ ಆರ್ಸಿಬಿ ಪರ ಆಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕಾರ್ತಿಕ್ ಅವರು ಈ ಬಾರಿ ಕ್ರಮವಾಗಿ 32, 14, 44, 7, 34 ಹಾಗೂ 66 ರನ್ ಗಳಿಸಿದ್ದು, 209.57ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಒಟ್ಟು ಆಡಿರುವ 6 ಇನ್ನಿಂಗ್ಸ್ಗಳ ಪೈಕಿ 5ರಲ್ಲಿ ನಾಟೌಟ್ ಆಗಿ ಉಳಿದಿದ್ದು 197ರ ಸರಾಸರಿ ಹೊಂದಿದ್ದಾರೆ.
‘ಟಿ–20 ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿರಬೇಕು ಎಂದು ಬಯಸುತ್ತಿರುವುದಾಗಿ ಅವರು ಹೇಳಿದ್ದಾರೆ. ಹಿಗಾಗಿ ನಾನು ಹೇಳುವುದಿಷ್ಟೆ, ಅವರ ವಯಸ್ಸು ನೋಡಬೇಡಿ. ಅವರು ಯಾವ ರೀತಿ ಆಟವಾಡುತ್ತಿದ್ದಾರೆ ಎಂಬುದನ್ನು ನೋಡಿ’ ಎಂದು ‘ಸ್ಟಾರ್ ಸ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 34 ಎಸೆತಗಳಲ್ಲಿ 66 ರನ್ ಗಳಿಸಿ ಅಜೇಯರಾಗುಳಿದಿದ್ದ ಕಾರ್ತಿಕ್, ತಂಡದ ಗೆಲುವಿಗೆ ನಿರ್ಣಾಯಕ ಕೊಡುಗೆ ನೀಡಿದ್ದರು. ಕಾರ್ತಿಕ್ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಸವಾಲಿನ ಮೊತ್ತ ನೀಡುವುದು ಸಾಧ್ಯವಾಗಿತ್ತು. ಆ ಪಂದ್ಯವನ್ನು ಆರ್ಸಿಬಿ 16 ರನ್ಗಳಿಂದ ಗೆದ್ದುಕೊಂಡಿತ್ತು.
‘ಉತ್ತಮ ಫಾರ್ಮ್ನಲ್ಲಿರುವ ಅವರು ತಮ್ಮ ಪ್ರದರ್ಶನದಿಂದ ಆಟದ ಖದರ್ ಅನ್ನೇ ಬದಲಾಯಿಸುತ್ತಿದ್ದಾರೆ. ವಿಶ್ವಕಪ್ ತಂಡದಲ್ಲಿಯೂ 6 ಅಥವಾ 7ನೇ ಕ್ರಮಾಂಕದಲ್ಲಿ ಅವರಿಂದ ಈ ಬ್ಯಾಟಿಂಗ್ ನಿರೀಕ್ಷಿಸಬಹುದು’ ಎಂದು ಗವಾಸ್ಕರ್ ಹೇಳಿದ್ದಾರೆ.