ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಕ್ಕಾಗಿ ತ್ಯಾಗ ಮಾಡಿದ ಮಾಚಿದೇವ

Last Updated 2 ಫೆಬ್ರುವರಿ 2018, 9:16 IST
ಅಕ್ಷರ ಗಾತ್ರ

ಬೀದರ್: ‘ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ತ್ಯಾಗ ಸ್ಮರಣೀಯ. ಪ್ರತಿಯೊಬ್ಬರು ಮಾಚಿದೇವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರೊ. ಶಿವಶರಣಪ್ಪ ಹುಗ್ಗಿಪಾಟೀಲ ಹೇಳಿದರು.
ಜಿಲ್ಲಾ ಆಡಳಿತದ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘12ನೇ ಶತಮಾನದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿದ ಸಾಮಾಜಿಕ ಕ್ರಾಂತಿ ಬಸವಕಲ್ಯಾಣದಲ್ಲಿ ನಡೆದಿದೆ. ಸಮಾನತೆ, ಜಾತಿಯತೆ ನಿರ್ಮೂಲನೆ, ಸ್ತ್ರೀ ಸ್ವಾತಂತ್ರ್ಯ ಅದರ ಮೂಲ ಉದ್ದೇಶವಾಗಿತ್ತು’ ಎಂದು ತಿಳಿಸಿದರು.

‘ಬುದ್ಧನ ನಂತರ ಶೂದ್ರರನ್ನು ಉದ್ಧರಿಸುವವರು ಯಾರೂ ಇರಲಿಲ್ಲ. ಸಮಾಜದಲ್ಲಿ ಕವಿದಿದ್ದ ಕಾರ್ಮೋಡ ಸರಿಸಿ ಶರಣರು ಬಂದರು. ಎಲ್ಲರೂ ಸೇರಿ ಮಾನವೀಯ ಮೌಲ್ಯಗಳ ಸಿದ್ಧಾಂತ ರಚಿಸಿದರು’ ಎಂದು ಹೇಳಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಮಾತನಾಡಿ,‘ ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ ಫಲವಾಗಿ ತಳ ಸಮುದಾಯದವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದರು.

‘ಮಡಿವಾಳ ಸಮಾಜದವರು ಶ್ರಮಜೀವಿಗಳು. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಹುದ್ದೆಗಳನ್ನು ಪಡೆಯಲು ಉತ್ತೇಜನ ನೀಡಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ‘ಮಡಿವಾಳ ಮಾಚಿದೇವರು ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಪ್ರತಿಪಾದಿಸಿದ್ದರು’ ಎಂದು ಹೇಳಿದರು. ‘ಜಗತ್ತಿನಲ್ಲಿಯೇ ಶ್ರೇಷ್ಠವಾದ ವಚನ ಸಾಹಿತ್ಯದ ರಕ್ಷಣೆ ಮಾಡುವಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ‘ಮಡಿವಾಳ ಸಮಾಜದವರ ಅನುಕೂಲಕ್ಕಾಗಿ ಶುಕ್ಲತೀರ್ಥದ ಬಳಿ ₹ 8 ಲಕ್ಷ ವೆಚ್ಚದಲ್ಲಿ ಧೋಬಿ ಘಾಟ್ ನಿರ್ಮಿಸಲು ಒಪ್ಪಿಗೆ ನೀಡಲಾಗಿತ್ತು. ಪ್ರಸ್ತುತ ಹಾಗೆಯೇ ಉಳಿದಿದೆ’ ಎಂದು ಹೇಳಿದರು.

‘ಜಿಲ್ಲಾ ಆಡಳಿತವು ಮಡಿವಾಳ ಸಮಾಜದವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಬೀದರ್‌ ನಗರದಲ್ಲಿ ಜಾಗ ಮಂಜೂರು ಮಾಡಿದರೆ ಶಾಸಕರ ಅನುದಾನದಿಂದ ₹ 10 ಲಕ್ಷ ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಪಂಡಿತರಾವ್‌ ಚಿದ್ರಿ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ, ಮಡಿವಾಳ ಸಮಾಜದ ಮುಖಂಡರಾದ ಬಾಬುರಾವ್ ಮಡಿವಾಳ, ಧನರಾಜ ಮಡಿವಾಳ, ಶಿವಕುಮಾರ ಕಂದಗೂಳೆ, ಸುಭಾಷ ಮಡಿವಾಳ, ಸಿದ್ರಾಮಪ್ಪ ಮಡಿವಾಳ, ದಶರಥ, ರಾಜು ಮಡಿವಾಳ, ಲಿಂಗಪ್ಪ ಮಡಿವಾಳ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT