ಧಾರವಾಡ: ಬಿಜೆಪಿಯ ಅಮೃತ ದೇಸಾಯಿ ಗುರುವಾರ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.ಇದೇ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ರಾಜಶೇಖರಯ್ಯ ಕಂತಿಮಠ ಹಾಗೂ ಬಸವರಾಜ ಪರಸಣ್ಣವರ ಅವರೂ ಚುನಾವಣಾಧಿಕಾರಿ ಪಿ.ಜಯಮಾಧವ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೂರನೇ ದಿನವಾದ ಗುರುವಾರ ಶುಭ ಘಳಿಗೆ ಇದ್ದ ಕಾರಣ ಅಮೃತ ದೇಸಾಯಿ ಅವರು ಬಿ ಫಾರ್ಮ್ ಇಲ್ಲದೇ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುರುವಾರ ಶುಭ ಘಳಿಗೆ ಇದೆ ಎಂದು ಹಿರಿಯರು ಹೇಳಿದ ಕಾರಣ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ. 23ರಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.
ಕಲಘಟಗಿ: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ವಿವೇಕ ಹೋರಾಟ ಸಮಿತಿ ಅಧ್ಯಕ್ಷ ರಾಜು ಆರ್. ಕಲಘಟಗಿ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಹನ್ನೆರಡು ಮಠದಿಂದ ವಿವೇಕ ಹೋರಾಟ ಸಮಿತಿ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದರು. ಚುನಾವಣಾ ಅಧಿಕಾರಿ ಡಾ. ಔದ್ರಮ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ
ಕುಂದಗೋಳ: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಅಕ್ಕಿ ಗುರುವಾರ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಬಸವರಾಜ ಕೊರವರ ನಾಮಪತ್ರ ಸ್ವೀಕರಿಸಿದರು.