ಮಾಗಡಿ: ಮಾತೃ ಭಾಷೆಯಲ್ಲಿನ ಕಲಿಕೆ ಮಗುವಿನ ಅರಿವಿಂಗೆಅಡಿಗಲ್ಲು. ತಿಳಿವಿಂಗೆ ತಳಹದಿ. ಬಾಳಿಂಗೆ ಒಡನಾಡಿ ಇದ್ದಂತೆ ಎಂದು ಸಾಹಿತಿ ಡಿ.ರಾಮಚಂದ್ರಯ್ಯ ಅಭಿಪ್ರಾಯಪಟ್ಟರು.
ಸೋಮವಾರ ನಡೆದ ಸರ್ಕಾರಿ ಶಾಲೆ ಉಳಿಯಲಿ–ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ 2018–19ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆ, ಬಿಆರ್ಸಿ ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾಗಿ ಸಮಿತಿ ಸಮನ್ವಯ ವೇದಿಕೆ, ಮಗು ಮತ್ತು ಕಾನೂನು ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ, ಓದಿಸದಿದ್ದರೆ ಪೊಷಕರೆ ತಮ್ಮ ಮಕ್ಕಳನ್ನು ಅಡ್ಡದಾರಿಗೆ ತಳ್ಳಿದಂತೆ. ಆರ್ಟಿಇ ಕಾಯ್ದೆ ಸರ್ಕಾರಿ ಶಾಲೆಗಳಿಗೆ ಕಂಟಕವಾಗಿದೆ. ಸರ್ಕಾರಕ್ಕೆ ಮಾತೃಭಾಷೆ ಉಳಿಸುವ ಜರೂರತ್ತಿದ್ದರೆ ತಕ್ಷಣ ಆರ್ಟಿಇ ಕಾಯ್ದೆ ರದ್ದು ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಸಕಲ ಸವಲತ್ತು ನೀಡಿ ಕನ್ನಡದಲ್ಲಿ ಕಲಿತವರಿಗೆ ಉದ್ಯೋಗ ನೀಡುವ ಬಗ್ಗೆ ಸುಗ್ರಿವಾಜ್ಞೆ ತರಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ‘ಮಾತೃಭಾಷೆ ಉಳಿವು ನಮ್ಮೆಲ್ಲರ ಉಳಿವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ ಪ್ರಚಾರಾಂದೋಲನದ ಕರ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಕಲಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದರು.
ವಿಶೇಷ ದಾಖಲಾತಿ ಆಂದೋಲನ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲಾಗುವುದು. ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿತರೆ ಮಾತ್ರ ಬದುಕು ಎಂಬ ಭ್ರಮೆ ಪೋಷಕರು ಕೈಬಿಡಬೇಕು. ಮೇ 29ರಂದು ಶಾಲೆ ಪ್ರಾರಂಭೋತ್ಸವ ಆಚರಿಸಲಾಗುವುದು. ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಬಿಸಿಯೂಟದ ಜೊತೆಗೆ ಸಿಹಿಯೂಟ ನೀಡಲಾಗುವುದು ಎಂದರು.
ಸಬ್ ಇನ್ಸ್ಪೆಕ್ಟರ್ ಅಶೋಕ್ ಮಾತನಾಡಿ, ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿತವರು ವಿಜ್ಞಾನಿ, ವೈದ್ಯರು, ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ಪೋಷಕರು ಮನಗಾಣಬೇಕು ಎಂದರು.
ಬಿಆರ್ಸಿ ಸಮನ್ವಯಾಧಿಕಾರಿ ರೂಪಾಕ್ಷ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸವಲತ್ತು ಮತ್ತು ಶಿಕ್ಷಕರ ಬೌದ್ಧಿಕ ಗುಣಮಟ್ಟದ ಬಗ್ಗೆ ಅವರು ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಶುವಿಹಾರ ಆರಂಭಿಸಬೇಕು ಎಂದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕಾರಾಧ್ಯ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್, ಬಿಆರ್ಪಿಗಳಾದ ಗೋವಿಂದರಾಜು, ರವಿಕುಮಾರ್, ಉಮಾದೇವಿ, ಮಂಜಪ್ಪ, ಚಿಕ್ಕಹನುಮಂತಯ್ಯ,ಸಿಆರ್ಪಿ ಮುನಿಯಪ್ಪ, ಐಇಆರ್ಟಿಗಳಾದ ರಂಗರಾಜು, ವಿಜಯ್, ರಾಜೇಶ್ವರಿ, ಲಕ್ಷ್ಮೀನರಸಿಂಹಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಅಶೋಕ್, ಕಾರ್ಯದರ್ಶಿ ಸವಿತ ಮಾತನಾಡಿದರು.
ಕಿರೀಟಪ್ಪ, ಮಲ್ಲಿಕಾರ್ಜುನಸ್ವಾಮಿ, ಅನ್ಸರ್ ಪಾಷಾ, ನಾಗರಾಜು, ಕುಮಾರಸ್ವಾಮಿ, ತಿರುಮಲೆ ಶಶಿಧರ, ತಿಮ್ಮಯ್ಯ, ಶಬಿನ್ ತಾಜ್, ಚಿಕ್ಕಹಳ್ಳಿ ನಾಸಿರ್, ಸಿಆರ್ಪಿಗಳಾದ ಚನ್ನಪ್ಪ, ನರಸಿಂಹ ಮೂರ್ತಿ, ಧನಂಜಯ,ನಾಗರಾಜು, ನರಸಿಂಹಯ್ಯ ಇದ್ದರು.
ತಿರುಮಲೆ ಸರ್ಕಾರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಯಶೋದಮ್ಮ ಸರ್ಕಾರಿ ಶಾಲೆ ಉಳಿಸಿ ಮೆರವಣಿಗೆ
ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.