ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸದಾಶಿವ ರಾವ್ಜೀ ಪಾಟೀಲ (86) ಮಂಗಳವಾರ ನಿಧನರಾದರು. ದೇಶದ ಪರ ಒಂದು ಟೆಸ್ಟ್ ಪಂದ್ಯದಲ್ಲಿ ಅವರು ಆಡಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
‘ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸದಲ್ಲಿ ಮಂಗಳವಾರ ನಸುಕಿನ ಜಾವ ನಿದ್ರೆಯಲ್ಲಿದ್ದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ‘ ಎಂದು ಕೊಲ್ಲಾಪುರದ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮಾಜಿ ಸಿಬ್ಬಂದಿ ರಮೇಶ್ ಕದಮ್ ಮಾಹಿತಿ ನೀಡಿದ್ದಾರೆ.
‘ಮಧ್ಯಮ ವೇಗದ ಬೌಲರ್ ಆಗಿದ್ದ ಸದಾಶಿವ ಅವರು 1955ರಲ್ಲಿ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಭಾರತ ತಂಡದ ಪರ ಅದೇ ಅವರ ಕೊನೆಯ ಪಂದ್ಯವೂ ಆಗಿತ್ತು. ಪಾಲಿ ಉಮ್ರಿಗರ್ ಅವರು ಆಗ ತಂಡದ ನಾಯಕರಾಗಿದ್ದರು.
1952–64ರ ಅವಧಿಯಲ್ಲಿ ಸದಾಶಿವ ಅವರು ಮಹಾರಾಷ್ಟ್ರ ಪರ 36 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದರು. 886 ರನ್ ಹಾಗೂ 83 ವಿಕೆಟ್ ಗಳಿಸಿದ್ದರು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವವನ್ನೂ ವಹಿಸಿದ್ದರು.
ಸದಾಶಿವ ಅವರ ನಿಧನಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ.